ಬಸವನಬಾಗೇವಾಡಿ ಕ್ಷೇತ್ರಕ್ಕೆ 3 ಕೆ.ಪಿ.ಎಸ್ ಶಾಲೆ ಮಂಜೂರು

ಸಪ್ತಸಾಗರ ವಾರ್ತೆ, ವಿಜಯಪುರ, ಅ. 16 : ರಾಜ್ಯ ಸರ್ಕಾರ ರಾಜ್ಯದ ಆಯ್ದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆ.ಪಿ.ಎಸ್.) ಉನ್ನತೀಕರಿಸಿ ಆದೇಶ ಹೊರಡಿಸಿದೆ. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ತವರು ಕ್ಷೇತ್ರವಾದ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರಕ್ಕೂ 3 ಕೆ.ಪಿ.ಎಸ್ ಶಾಲೆಗಳನ್ನು ಮಂಜೂರು ಮಾಡಿ ಆದೇಶಿಸಿದೆ.
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೊಲ್ಹಾರದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಇವಣಗಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಯಂಭತ್ನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇವುಗಳನ್ನು ಕೆ.ಪಿ.ಎಸ್. ಶಾಲೆಗಳಾಗಿ ಉನ್ನತೀಕರಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಪುನರ್ವಸತಿ ಕೇಂದ್ರ ಹಾಗೂ ತಾಲೂಕ ಕೇಂದ್ರವಾಗಿರುವ ಕೊಲ್ಹಾರ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇರಲಿಲ್ಲ. ಪರಿಣಾಮ ಖಾಸಗಿ ಶಿಕ್ಷಣ ಸಂಸ್ಥೆಗಳ ಡೋನೇಶನ್ ಹಾವಳಿ, ಅಧಿಕ ಶುಲ್ಕ ವಸೂಲಿಯಿಂದ ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಇದನ್ನು ತಪ್ಪಿಸಲು ಸಚಿವ ಶಿವಾನಂದ ಪಾಟೀಲ ಅವರು ಯೋಜನಾ ನಿರಾಸ್ರಿತ ಸಂತ್ರಸ್ಥರ ಮಕ್ಕಳಿಗೆ ಶೈಕ್ಷಣಿಕ ಆರ್ಥಿಕ ಹೊರೆ ತಪ್ಪಿಸಲು ಸಚಿವರು ಕೆಪಿಎಸ್ ಶಾಲೆಯನ್ನು ಮಂಜೂರು ಮಾಡಿಸಿದ್ದಾರೆ.
ಇದಲ್ಲದೇ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದ ಗಡಿಯಲ್ಲಿರುವ ಯಂಭತ್ನಾಳ ಹಾಗೂ ಇವಣಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಗಳು ಮಾತ್ರವೇ ಇದ್ದವು. ಪದವಿ ಪೂರ್ವ ಶಿಕ್ಷಣಕ್ಕಾಗಿ ಈ ಗ್ರಾಮಗಳು ಸೇರಿದಂತೆ ಸುತ್ತಲಿನ ಹಳ್ಳಿಗಳ ಮಕ್ಕಳು ದೂರದ ಊರುಗಳಿಗೆ ಅಲೆಯಬೇಕಿತ್ತು. ಇದನ್ನು ತಪ್ಪಿಸಲು ಸಚಿವರು ಗಡಿ ಭಾಗದ ಹಳ್ಳಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ನೀಗಲು ಸಚಿವ ಶಿವಾನಂದ ಪಾಟೀಲ ಅವರು ಕೆ.ಪಿ.ಎಸ್. ಶಾಲೆಗಳನ್ನು ಮಂಜೂರು ಮಾಡಿಸಿದ್ದಾರೆ.
ಉನ್ನತ ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ, (ಕೆ.ಪಿ.ಎಸ್.) ಮಂಜೂರು ಮಾಡಿದೆ. ಎಲ್.ಕೆ.ಜಿ. ಹಂತದಿಂದ ದ್ವಿತಿಯ ಪಿಯುಸಿ ವರೆಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ಶಾಲೆಗಳನ್ನು ಮಂಜೂರು ಮಾಡಿದೆ. ಎಂದು ಕೆ.ಪಿ.ಎಸ್. ಶಾಲೆಗಳಿಗೆ ಮಂಜೂರಾತಿ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ವಿ. ಶುಭಮಂಗಳ ತಿಳಿಸಿದ್ದಾರೆ.

Share this