ಶಾಲಾ ಮಕ್ಕಳಿಗೆ ಒಣದ್ರಾಕ್ಷಿ ಯೋಜನೆ : ವಿಜಯಪುರ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 27 :
ಶಾಲಾ ಮಕ್ಕಳಿಗೆ ಆರೋವರ್ಧಕವಾಗಿರುವ ಒಣದ್ರಾಕ್ಷಿ ವಿತರಣೆ ಕುರಿತು ವಿಜಯಪುರದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.
ಭಾನುವಾರ ನಗರದಲ್ಲಿ ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ವಿತರಣೆ ಜೊತೆಗೆ ಒಣದ್ರಾಕ್ಷಿ ವಿತರಣೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ವಿಜಯಪುರದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಇತಿಹಾಸದಲ್ಲೇ ಒಣದ್ರಾಕ್ಷಿ ಬೆಳೆಗೆ ಮೊದಲ ಬಾರಿಗೆ 500-600 ರೂ. ದರ ಸಿಕ್ಕಿದ್ದು, ಭವಿಷ್ಯದಲ್ಲಿ ಗುಣಮಟ್ಟದ ಮೌಲ್ಯವರ್ಧನೆ, ಗ್ರೇಡಿಂಗ್‍ನಂಥ ವಿಷಯಗಳಿಗೆ ಆದ್ಯತೆ ನೀಡಿದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಭವಿಷ್ಯವಿದೆ ಎಂದರು.
ಭಾರತದಲ್ಲೇ ಹಸಿದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಲಿಂಬೆ, ದಾಳಿಂಬೆ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ತೋಟಗಾರಿಕೆ ಜಿಲ್ಲೆ ಎಂಬ ಕೀರ್ತಿ ಸಂದಿದೆ. ದೇಶದಲ್ಲೇ ಅಧಿಕ ಪ್ರಮಾಣದಲ್ಲಿ ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ದ್ರಾಕ್ಷಿ ಬೆಳೆಯಲಾಗುತ್ತದೆ. ಹೀಗಾಗಿ ವಿಜಯಪುರ ಜಿಲ್ಲೆಯನ್ನು ಒಣದ್ರಾಕ್ಷಿ ಹಬ್ ಮಾಡಿ, ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಯವಾಗಿ ಸಂಶೋಧನೆ ನಡೆಸಲು ಮುಂದಾದಲ್ಲಿ ವಿಜಯಪುರದಲ್ಲಿ ಎಪಿಎಂಸಿ ಮೂಲಕ 20 ಎಕರೆ ಜಮೀನು ನೀಡುವುದಾಗಿ ಘೋಷಿಸಿದರು.
ವಿಜಯಪುರ ಜಿಲ್ಲೆಯಲ್ಲಿ ವೈನ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ 141 ಎಕರೆ ಜಮೀನು ನೀಡಿದ್ದು, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ 35 ಕೋಲ್ಡ್ ಸ್ಟೋರೇಜ್‍ಗಳನ್ನೂ ನಿರ್ಮಿಸಲಾಗುತ್ತಿದೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ, ವಿಷಮುಕ್ತವಾಗಿ ಗುಣಮಟ್ಟದ, ರಫ್ತು ದರ್ಜೆಯ ದ್ರಾಕ್ಷಿ ಬೆಳೆಯುವ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡಿವುದು ಅಗತ್ಯವಾಗಿದೆ. ಇದಕ್ಕಾಗಿ ವಿಜಯಪುರದಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಬಹುತೇಕ ಒಣದ್ರಾಕ್ಷಿ ಉತ್ಪಾದಿಸುತ್ತಿದ್ದು, ವಿಷಮುಕ್ತ ಒಣದ್ರಾಕ್ಷಿ ಉತ್ಪಾದನೆಗೆ ಆದ್ಯತೆ ನೀಡುವ ಸಂಶೋಧನೆ ನಡೆಯಬೇಕಿದೆ ಎಂದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದ್ದರೂ ವಿಜಯಪುರ ಜಿಲ್ಲೆಗೆ ನಿರೀಕ್ಷಿತ ಲಾಭವಾಗಿಲ್ಲ. ಬಾಗಲಕೋಟೆ ಆಚೆಗೂ ವಿಜಯಪುರ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿನ ತೋಟಗಾರಿಕೆ ಬೆಳೆಗಳ ಕುರಿತು ಆದ್ಯತೆ ನೀಡಬೇಕಿದೆ ಎಂದು ಸೂಚಿಸಿದರು.
ದ್ರಾಕ್ಷಿ ಬೆಳಗಾರರ ಶ್ರೇಯೋಭಿವೃದ್ಧಿಗಾಗಿ ಪುಣೆಯಲ್ಲಿ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರ ತೆರೆಯುವಲ್ಲಿ ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹಾಗೂ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಫನ್ ಕಾಂಚನ್ ಅವರ ಪರಿಶ್ರಮ ಸ್ಮರಣಾರ್ಹ ಎಂದರು.
ವಿಶಿಷ್ಟ ಸ್ವಾದದ ಉತ್ಕೃಷ್ಟ ದರ್ಜೆಯ ಒಣದ್ರಾಕ್ಷಿ ಉತ್ಪಾದಿಸುವ ವಿಜಯಪುರದ ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್‍ಮಿಸ್ ಹೆಸರಿನಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಡಾ.ಫಕೃದ್ಧಿನ ಅಧ್ಯಕ್ಷತೆಯಲ್ಲಿ ಸಮಿತಿ ಅಗತ್ಯ ದಾಖಲೆ ಹಾಗೂ ಪೂರಕ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಶೀಘ್ರವೇ ವಿಜಯಪುರ ಹಸಿರು ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸಿಗಲಿದೆ ಎಂದರು.
ಇದೇ ವೇಳೆ ದ್ರಾಕ್ಷಿ ಬೆಳೆಯುವಲ್ಲಿ ಸಾಧನೆ ಮಾಡಿರುವ ಕರ್ನಾಟಕದ ವಿ.ಡಿ.ಪಾಟೀಲ, ಮಹಾರಾಷ್ಟ್ರದ ಸೊಲ್ಲಾಪುರದ ಮಹಾದೇವ ಚಾಕೋಟೆ, ನಾಸಿಕ್ ನ ಅಶೋಕ ಗಾಯಕವಾಡ, ಪುಣೆಯ ಅನಿಲ ಮೆಹರೆ ಸಾಂಗಲಿಯ ಜಗನ್ನಾಥ ಮಸ್ಕೆ, ತಮಿಳುನಾಡಿನ ಸೇಂಥಿಲಕುಮಾರ, ಆಂಧ್ರಪ್ರದೇಶದ ವೆಂಟಕರೆಡ್ಡಿ ಕನಕರೆಡ್ಡಿ ಇವರಿಗೆ ಸಚಿವ ಶಿವಾನಂದ ಪಾಟೀಲ ಅವರು ದ್ರಾಕ್ಷಿ ಭೂಷಣ್ ಪ್ರಶಸ್ತಿ ಪ್ರದಾನ ಮಾಡಿದರು.
ಯುವ ಉದ್ಯಮಿಗಳಾದ ನಿಖಿತಾ ಬಿರಾದಾರ, ಅಣ್ಣಾರಾಯ ಬಿರಾದಾರ ಅವರು ಒಣದ್ರಾಕ್ಷಿಯಲ್ಲಿ ಉಪ್ಪು, ಖಾರ, ಚಾಕಲೇಟ್, ಪೇರಲ, ಕ್ರೈನಬರಿ, ಚಟಪಟಾ, ಪಾನ್ ಹಾಗೂ ಗುಲಾಬಿ ಹೂವಿನ ಸ್ವಾದದ ವಿವಿಧ ಮೌಲ್ಯವರ್ಧಿತ ಪ್ಯಾಕಿಂಗ್‍ನ ಸ್ನ್ಯಾಕ್ ಇನ್ ಬ್ರ್ಯಾಂಡ್‍ನ ಒಣದಾಕ್ಷಿ ಉತ್ಪನ್ನಗಳನ್ನು ಸಚಿವ ಶಿವಾನಂದ ಪಾಟೀಲ ಬಿಡುಗಡೆ ಮಾಡಿದರು.
ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿ ಹಾರಹಾಕಿ ವಿಶಿಷ್ಟವಾಗಿ ಸನ್ಮಾನಿಸಿದರು.
ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಫನ್ ಕಾಂಚನ್, ಉಪಾಧ್ಯಕ್ಷ ಬಿ.ಎಂ.ಕೋಕರೆ, ಕೈಲಾಸ್ ಭೋಸಲೆ, ಎಸ್.ಡಿ.ಸಾವಂತ, ಮಾರುತಿ ಚವ್ಹಾಣ, ಎಸ್.ಡಿ.ಶಿಖಾಮಣಿ, ಪ್ರಕಾಶ ಗಣಿ, ಕೌಶಿಕ್ ಬ್ಯಾನರ್ಜಿ, ಬಾಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share