ಒಳ ಮೀಸಲಾತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಬೃಹತ್ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 1 : ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕುವ ಕರೆ ಮೇರೆಗೆ ಶುಕ್ರವಾರ ವಿಜಯಪುರದಲ್ಲಿಯೂ ವಿವಿಧ ಮಾದಿಗ ಸಮುದಾಯಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ವಿಜಯಪುರದಲ್ಲಿಯೂ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ತಮ್ಮ ಹಕ್ಕೊತ್ತಾಯ ಮಂಡಿಸಿದರು. ಒಳಮೀಸಲಾತಿ ಜಾರಿಗೊಳಸಲೇಬೇಕು ಎಂಬ ಘೋಷಣೆಗಳನ್ನು ಕೂಗಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ಒಕ್ಕೂಟದ ನೂರಾರು ಮುಖಂಡರು, ಯುವಕರು ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು.
ನೇತೃತ್ವ ವಹಿಸಿದ್ದ ಯುವ ಮುಖಂಡ ಉಮೇಶ ಕಾರಜೋಳ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಸಹ ಅನುಮತಿ ನೀಡಿದೆ. ಆದರೆ ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾತ್ರ ಇದಕ್ಕೆ ಬೆಲೆ ನೀಡುತ್ತಿಲ್ಲ. ಆ ಮೂಲಕ ಒಳಮೀಸಲಾತಿ ಕಲ್ಪಿಸದೇ ಮಾದಿಗ ಸಮುದಾಯಕ್ಕೆ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದೆ. ಒಳಮೀಸಲಾತಿ ಎನ್ನುವುದು ಸಂವಿಧಾನ ಕರುಣಿಸಿರುವ ಹಕ್ಕು. ಶೋಷಿತ ಸಮುದಾಯಗಳಲ್ಲಿಯೇ ಅತೀ ಹಿಂದುಳಿದಿರುವ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಕಳೆದ ವರ್ಷ ಇದೇ ದಿನ ಐತಿಹಾಸಿಕ ತೀರ್ಪು ನೀಡಿದೆ. ಆದರೆ ತೀರ್ಪು ನೀಡಿ ಒಂದು ವರ್ಷ ಕಳೆದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಮಾತು ನೀಡಿದ್ದರು. ಪ್ರಣಾಳಿಕೆಯಲ್ಲೂ ಘೋಷಿಸಿದ್ದರು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ಮಾತು ತಪ್ಪಿ ಕಾಲಹರಣಕ್ಕಾಗಿ ನ್ಯಾ.ನಾಗಮೋಹನ್‌ದಾಸ್ ಆಯೋಗ ರಚಿಸಿತು. ನಂತರ ೪೦ ದಿನಗಳಲ್ಲಿ ವರದಿ ಪಡೆಯುವುದಾಗಿ ಹೇಳಿತು. ಆದರೆ ಆರು ತಿಂಗಳು ಉರುಳಿವೆ. ಅತ್ತ ಸುಪ್ರೀಂಕೋರ್ಟ್ ಒಳಮೀಸಲಾತಿ ತೀರ್ಪು ಪ್ರಕಟಿಸಿ ವರ್ಷ ಕಳೆದು ಹೋಗಿದೆ. ಆದರೂ ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಿಲ್ಲ ಎಂದರು.
ಈಗಾಗಲೇ ತೆಲಂಗಾಣ, ಆಂಧ್ರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಒಂದೆಡೆ ಅಹಿಂದ ನಾಯಕರು ಎಂದು ತಮ್ಮ ಬೆನ್ನು ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳಮೀಸಲಾತಿ ಜಾರಿ ಏಕೆ ಮಾಡುತ್ತಿಲ್ಲ? ಯಾವ ಶಕ್ತಿಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಕಾರಜೋಳ ಖಾರವಾಗಿ ಪ್ರಶ್ನಿಸಿದರು.
ಈ ಅಧಿವೇಶನದ ಒಳಗಾಗಿ ಒಳಮೀಸಲಾತಿಯಯನ್ನು ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು, ಇಲ್ಲವಾದರೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲಾಗುವುದು, ಈ ನಿರ್ಧಾರಕ್ಕೆ ಸರ್ಕಾರ ಬದ್ಧವಾಗದೇ ಹೋದರೆ ಅಸಹಕಾರ ಮಾದರಿಯಲ್ಲಿ ಬೃಹತ್ ರೂಪದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಚಿವರಿಗೆ ಸರ್ಕಾರಿ ಕಛೇರಿಗಳಲ್ಲಿ ಬಾಗವಹಿಸಲು ಬಿಡುವುದಿಲ್ಲ. ಅವರ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸಿ ನಮ್ಮ ಹೋರಾಟವನ್ನು ತೀವ್ರಗೊಳಿಸಲು ಸಹ ನಾವು ಹಿಂದೇಟು ಹಾಕುವುದಿಲ್ಲ ಎಂದು ಗುಡುಗಿದರು.
ವಿವಿಧ ಸಂಘಟನೆಯ ಪ್ರಮುಖರಾದ ಎಸ್.ಎಸ್ ಲೋಟಗೇರಿ, ಭೀಮು ಮೇಲಿನಮನಿ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಅಶೋಕ ಕರೆಕಲ್,ಸಂತೋಷ ತಳಕೇರಿ, ಸಾಯಬಣ್ಣ ಪುರದಾಳ, ಶಿವು ಬಗಲಿ, ಆಕಾಶ ಮನಗೂಳಿ, ಶ್ರೀನಾಥ ಬೈರವಾಡಗಿ, ಸುರೇಶ ಗಚ್ಚಿನಮನಿ, ಎಮ್.ಆರ್. ದೊಡಮನಿ, ಪರಶುರಾಮ ರೋಣಿಹಾಳ, ವಿಠ್ಠಲ ಆಸಂಗಿ, ದತ್ತು ಬಂಡೆನ್ನವರ, ಸದಾನಂದ ಗುನ್ನಾಪುರ‌. ವಿಠ್ಠಲ ನಡುವಿನಕೇರಿ ಮೊದಲಾದವರು ಪಾಲ್ಗೊಂಡಿದ್ದರು.

Share