ಸಪ್ತಸಾಗರ ವಾರ್ತೆ, ವಿಜಯಪುರ, ಆ. 6:
ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಬುಧವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಂತರ ಪ್ರತಿಭಟನೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ
ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸದೆ ತಾತ್ಸಾರ ಧೋರಣೆ ತಾಳಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರೈತರಿಗೆ ಪೊಳ್ಳು ಭರವಸೆ ಕೊಟ್ಟ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ರೈತರನ್ನು ತುಳಿಯುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ನೀತಿ ಇದೇ ರೀತಿ ಮುಂದುವರೆದರೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಲ ದೇಶದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಆದರೆ ರಾಜ್ಯ ಸರ್ಕಾರ ಮಾಡಿರುವ ಸಾಲ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವಂತಹದಾಗಿದೆ ಎಂದು ಆರೋಪಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ ಎಂಬ ಅರಿವಿದ್ದರೂ ಮುಂದಾಲೋಚನೆ ಮಾಡದೇ ರೈತರಿಗೆ ರಸಗೊಬ್ಬರ ಕೊಡದೇ ಇರುವ ರಾಜ್ಯದ ಅಶಕ್ತ ಕಾಂಗ್ರೆಸ್ ಸರ್ಕಾರ ಏನಾದರೂ ಕೇಳಿದರೂ ಕೇಂದ್ರದ ಕಡೆಗೆ ಬೊಟ್ಟು ತೋರಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ರಸಗೊಬ್ಬರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು ಅವರು ಕೊಡದೇ ಇದ್ದರೆ ಅವರ ವಿರುದ್ದ ದೋಷಣೆ ಮಾಡುವ ಸಿಎಂ ಸಿದ್ಧರಾಮಯ್ಯ ಹೀನ ರಾಜಕಾರಣ ನಡೆಸಿ ಕೇಂದ್ರದಿಂದ ರಸಗೊಬ್ಬರ ಬರುತ್ತಿಲ್ಲವೆಂದು ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಈ ಹಂಗಾಮಿಗೆ ಆಗುವಷ್ಟು ರಸಗೊಬ್ಬರ ಈಗಾಗಲೇ ರಾಜ್ಯಕ್ಕೆ ಬಂದಿದ್ದರೂ ಅದನ್ನು ಸರಿಯಾಗಿ ರೈತರಿಗೆ ಹಂಚದೇ ಕಾಳಸಂತೆಯಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಸಂಜೀವ ಐಹೊಳೆ, ಮುಳುಗೌಡ ಪಾಟೀಲ, ಈರಣ್ಣ ರಾವೂರ, ಸಂಜಯ ಪಾಟೀಲ, ಸಾಬು ಮಾಶ್ಯಾಳ, ಬಾಲರೆಡ್ಡಿ, ಉಮೇಶ ವಂದಾಲ, ಮಹೇಂದ್ರ ನಾಯಕ, ಛಾಯಾ ನುಸೇನವರ, ಭಾರತಿ ಭುಯ್ಯಾರ, ಭರತ ಕೋಳಿ, ಚಿದಾನಂದ ಛಲವಾದಿ, ಸಂಗಮೇಶ ಉಕ್ಕಲಿ, ಭರತ ಕೋಳಿ, ಮಲ್ಲಿಕಾರ್ಜುನ ಕಿವಡೆ, ಮಲ್ಲು ಕಲಾದಗಿ ,ರವಿಕಾಂತ ಬಗಲಿ, ಜಗದೀಶ ಪಂಪಣ್ಣವರ, ಸಿದ್ದು ಮಕಣಾಪೂರ, ರಾಮಚಂದ್ರ ಚವ್ಹಾಣ, ಬಸವರಾಜ ಹಳ್ಳಿ, ರಾಹುಲ್ ಜಾಧವ, ಸಂಗಮೇಶ ಉಕ್ಕಲಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ


