ಸಪ್ತ ಸಾಗರ ವಾರ್ತೆ, ವಿಜಯಪುರ, ಆ. 12:
ನಗರ ಸ್ಥಳೀಯ ಸಂಸ್ಥೆಗಳ ಮೇಯರ್, ಉಪಮೇಯರ್, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರ ಮನವಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಮಂಗಳವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸುನೀಲಗೌಡ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಲಿಖಿತ ಉತ್ತರ ನೀಡಿದ್ದರು.
ಈ ಉತ್ತರಕ್ಕೆ ತೃಪ್ತರಾಗದ ಶಾಸಕರು, ಕೇರಳ, ಹರಿಯಾಣ, ತಮಿಳನಾಡು, ತೆಲಗಾಂಣ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನೀಡಲಾಗುತ್ತಿರುವ ಗೌರವಧನ ಅತೀ ಕಡಿಮೆ ಇದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಸಚಿವರು, ಶಾಸಕರು ಹಾಗೂ ಸರಕಾರಿ ನೌಕರರ ವೇತನ ಹೆಚ್ಚಿಸಲಾಗಿದೆ. ಆದರೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರಿಗೆ ಕಳೆದ ಒಂಬತ್ತು ವರ್ಷಗಳಿಂದ ಗೌರವಧನ ಹೆಚ್ಚಳ ಮಾಡಿಲ್ಲ. ಆದ್ದರಿಂದ ಕೂಡಲೇ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸದಸ್ಯರಿಗೆ ಕೇರಳದಲ್ಲಿ ಕ್ರಮವಾಗಿ ರೂ. 15800, ರೂ. 13200 ಹಾಗೂ ರೂ. 8200 ನೀಡಲಾಗುತ್ತಿದೆ. ಹರಿಯಾಣದಲ್ಲಿ ಈ ಗೌರವಧನ ರೂ. 30000, ರೂ. 25000 ಹಾಗೂ ರೂ. 15000 ಆಗಿದ್ದರೆ, ತಮಿಳುನಾಡಿನಲ್ಲಿ ಕ್ರಮವಾಗಿ ರೂ. 30000, ರೂ. 15000 ಹಾಗೂ ರೂ. 7800 ನಿಗದಿ ಪಡಿಸಲಾಗಿದೆ. ತೆಲಗಾಂಣದಲ್ಲಿ ರೂ. 65000, ರೂ. 32500 ಹಾಗೂ ರೂ. 7800 ನೀಡಲಾಗುತ್ತಿದೆ. ಅದೇ ರೀತಿ ಮಧ್ಯಪ್ರದೇಶದಲ್ಲಿ ಮೇಯರ್ ಗೆ ರೂ. 26400, ಉಪಮೇಯರ್ ಗೆ ರೂ. 21600 ಹಾಗೂ ಸದಸ್ಯರಿಗೆ ರೂ. 14400 ಗೌರವಧನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೇಯರ್ ಗೆ ರೂ. 16000, ಉಪಮೇಯರ್ ಗೆ ರೂ. 10000 ಹಾಗೂ ಸದಸ್ಯರಿಗೆ ರೂ. 6000 ಗೌರವಧನ ನೀಡಲಾಗುತ್ತಿದೆ ಎಂದು ಅವರು ಎಳೆಎಳೆಯಾಗಿ ಸದನದ ಗಮನಕ್ಕೆ ತಂದರು.
ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಿಗೆ ನೀಡಲಾಗುತ್ತಿರುವ ಗೌರವಧನವನ್ನು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಈ ಕುರಿತು ಕಳೆದ ಮೂರು ಅಧಿವೇಶನಗಳಲ್ಲಿ ನಾನು ಕೇಳಿದ ಈ ಪ್ರಶ್ನೆಗೆ ಅದೇ ಉತ್ತರ ನೀಡಲಾಗುತ್ತಿದೆ. ಈ ಬಾರಿಯೂ ಆರ್ಥಿಕ ಇಲಾಖೆ ಗೌರವಧನ ಹೆಚ್ಚಳಕ್ಕೆ ಒಪ್ಪಿಲ್ಲ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಶಾಸಕರು ಗಮನ ಸೆಳೆದರು. ಇದಕ್ಕೆ ಶಾಸಕರು ಪಕ್ಷಾತೀತವಾಗಿ ದ್ವನಿಗೂಡಿಸಿದರು.
ಇಂದಿನ ದಿನಗಳಲ್ಲಿ ದಿನಗೂಲಿ ನೌಕರರಿಗೆ ನಿಗದಿ ಪಡಿಸಲಾಗಿರುವ ವೇತನ ಪುರಸಭೆಯ ಸದಸ್ಯರಿಗೆ ನೀಡಲಾಗುವ ಗೌರವಧನಕ್ಕಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ಹೆಚ್ಚಳ ಕುರಿತು ಸದನದಲ್ಲಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಶಾಸಕ ಸುನೀಲಗೌಡ ಪಾಟೀಲ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಗೌರವಧನ ಹೆಚ್ಚಳ ಕುರಿತು ಚರ್ಚೆಗೆ ಒಪ್ಪಿಗೆ
