ಸಪ್ತಸಾಗರ ವಾರ್ತೆ, ವಿಜಯಪುರ, ಆ. 23:
ಬಸವ ತತ್ವದ ವೈಜ್ಞಾನಿಕ ಚಿಂತನೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಂದಿ ಕೂಗು ಅಭಿಯಾನ ಆ. 23 ರಂದು ವಿಜಯಪುರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಪ್ರಾರಂಭಿಸಿದರು. ಪಾದಯಾತ್ರೆಯ ನೇತೃತ್ವ ವಹಿಸಿದ ಬಸವರಾಜ ಬಿರಾದಾರ ಅವರು ಮಾತನಾಡಿ, ಗ್ರಾಮದಲ್ಲಿ ನಂದಿ ಸಂಪತ್ತು ಹೆಚ್ಚಾದರೆ ಬಸವ ತತ್ವ ಹಾಗೂ ಬಸವ ಸಂಸ್ಕೃತಿ ಉಳಿಯುತ್ತದೆ ಎಂದು ಅರ್ಥ. ಇಲ್ಲವಾದರೆ ನಾಶವಾಗುತ್ತಿದೆ ಎಂದು ಅರ್ಥ. ಏಕೆಂದರೆ ಬಸವ ತತ್ವ ನಂದಿ ಸಂಪತ್ತಿನ ಜೀವಂತಿಕೆ ಮೇಲೆ ನಿಂತಿದೆ ಎಂಬುದನ್ನು ಇಂದಿನ ಆಧುನಿಕ ವಿಜ್ಞಾನ ಸ್ಪಷ್ಟಪಡಿಸುತ್ತಿದೆ. ಅದಕ್ಕಾಗಿ ತೈಲ ತತ್ವದ ಬದಲು ಬಸವ ತತ್ವಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಗ್ರಾಮಗಳನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳುವ ಅವಶ್ಯಕತೆ ಬಂದೊದಗಿದೆ. ನಂದಿ ಸಂಪತ್ತು ಹೆಚ್ಚಿಸಿ ಬಸವ ತತ್ವ ಉಳಿಸಲು ಪ್ರಯತ್ನಿಸಿದರೆ ಪಂಚಮಹಾಭೂತಗಳು ಶುದ್ಧವಾಗಿ ಉಳಿಯುವುದರ ಜೊತೆಗೆ ದೈವಿಕ ಶಕ್ತಿ ವೃದ್ಧಿಯಾಗುವುದು ಎಂದರು.
ಶ್ರೀ ಸಿದ್ಧೇಶ್ವರ ದೆವಸ್ಥಾನದ ಮುಂದೆ ಜರುಗಿದ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜ್ಜರಗಿ, ಯತ್ನಾಳ, ಬಾಬಾನಗರ ಹಾಗೂ ಇತರ ಗ್ರಾಮಗಳ ಜೋಡೆತ್ತಿನ ರೈತರು ಭಾಗವಹಿಸಿದ್ದರು. ಪ್ರಮುಖರಾದ ಅರವಿಂದ ಕವಲಗಿ, ಅಭಿಷೇಕ ಬಿರಾದಾರ ಉದಯ ಯಾಳವಾರ, ಸಂಗಮೇಶ ಕಾಮನ್ನವರ, ಶ್ರೀಶೈಲ ಉಟಗಿ, ರಾಜು ದಳವಾಯಿ ಹಾಗೂ ಇತರರು ಭಾಗವಹಿಸಿದ್ದರು.
ನಂದಿ ಕೂಗು ಅಭಿಯಾನ: ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ
