ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 15: ನಾಳೆ ಮಂಗಳವಾರದಿಂದ ವಿಜಯಪುರ ನಗರದಿಂದ-ಚಿಕ್ಕಲಕಿ ಕ್ರಾಸ್ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಿದೆ.
ವಿದ್ಯಾರ್ಥಿಗಳು, ರೈತರು ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.
ಪ್ರತಿದಿನ ಎರಡು ಬಸ್ಸುಗಳು ವಿಜಯಪುರದಿಂದ ಖತಿಜಾಪುರ, ಸಾರವಾಡ, ಬಬಲೇಶ್ವರ, ಯಕ್ಕುಂಡಿ, ಅರ್ಜುಣಗಿ ಮಾರ್ಗವಾಗಿ ಚಿಕ್ಕಲಕಿ ಕ್ರಾಸ್ ವರೆಗೆ ಸಂಚರಿಸಲಿವೆ.
ಅದೇ ರೀತಿ ಇನ್ನೆರಡು ಬಸ್ಸುಗಳು ಚಿಕ್ಕಲಕಿ ಕ್ರಾಸ್ ನಿಂದ ಅರ್ಜುಣಗಿ, ಯಕ್ಕುಂಡಿ, ಬಬಲೇಶ್ವರ, ಸಾರವಾಡ, ಖತಿಜಾಪುರ ಮಾರ್ಗವಾಗಿ ವಿಜಯಪುರಕ್ಕೆ ಸಂಚರಿಸಲಿವೆ.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಯಕ್ಕುಂಡಿ ಗ್ರಾಮದಲ್ಲಿ ಎರಡು ಬಸ್ಸುಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ನಾಳೆಯಿಂದ ವಿಜಯಪುರ-ಚಿಕ್ಕಲಕಿ ಕ್ರಾಸ್ ಮಾರ್ಗದಲ್ಲಿ ಎರಡು ಬಸ್ ಕಾರ್ಯಾರಂಭ
