ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹೆಚ್ಚಳಕ್ಕೆ ಸಿಎಂ ಜೊತೆಗೆ ಚರ್ಚೆ: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.29 : ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಪ್ರಸ್ತುತ ೫ ಸಾವಿರ ರೂ. ತುರ್ತು ಪರಿಹಾರದ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತು ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ಪ್ರವಾಹ ಪರಿಸ್ಥಿತಿ ವೇಳೆ ತುರ್ತು ಪರಿಹಾರ ರೂಪವಾಗಿ ಐದು ಸಾವಿರ ರೂ. ನೀಡಲಾಗುತ್ತಿದೆ, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಪ್ರಥಮ ಹಂತದ ತುರ್ತು ಪರಿಹಾರವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಪ್ರವಾಹ ಸಂತ್ರಸ್ತರನ್ನು ಖುದ್ದು ಭೇಟಿ ಮಾಡಿ ಅವರ ಅಹವಾಲು ಆಲಿಸುವ ಕೆಲಸ ಮಾಡಿರುವೆ. ಅವರ ಜೊತೆ ಸರ್ಕಾರವಿದೆ, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಲಾಗಿದೆ ಎಂದರು.
ಇಂಡಿ ತಾಲೂಕಿನ ೦೮ ಗ್ರಾಮಗಳು ಮತ್ತು ಆಲಮೇಲ ತಾಲೂಕಿನ ೦೬ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಒಟ್ಟು ೧೭ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿ, ೧೮೫ ಕುಟುಂಬಗಳನ್ನೊಳಗೊಂಡಂತೆ (ಇಂಡಿ ತಾಲೂಕಿನಲ್ಲಿ ೫೪೧ ಜನ, ಆಲಮೇಲ ತಾಲೂಕಿನಲ್ಲಿ ೩೧೯ ಜನರನ್ನು) ಒಟ್ಟು ೮೬೦ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ, ವಸತಿ, ಉಪಹಾರ ಹಾಗೂ ಊಟದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಗೃಹ ಉಪಯೋಗಿ ವಸ್ತುಗಳ ಹಾನಿಯಾದ ಮತ್ತು ಮಳೆ ನೀರು ನುಗ್ಗಿರುವ ಒಟ್ಟು ೨೭೦ ಮನೆಗಳಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಹಾಗೂ ಸರ್ಕಾರದ ಆದೇಶಗಳನ್ವಯ ೧೩.೫೦ ಲಕ್ಷ ರೂ. ಪರಿಹಾರ ವಿತರಿಸಲಾಗಿದ್ದು, ಕಳೆದ ಎಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು ೧೭ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗಿರುತ್ತದೆ ಎಂದು ವಿವರಿಸಿದರು.

ಸಿಎಂ ವೈಮಾನಿಕ ಸಮೀಕ್ಷೆ

ಭೀಮಾ ನದಿ ಪ್ರವಾಹ ಹಾಗೂ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿವೆ. ಹೀಗಾಗಿ ಮುಖ್ಯಮಂತ್ರಿಗಳೇ ಖುದ್ದು ನಾಳೆ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಪರಿಹಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರ ಗಮನಕ್ಕೆ ತರಲಾಗುವುದು ಎಂದರು.
೬೮೧೫.೧೫ ಹೆಕ್ಟರ್ ಕೃಷಿ ಬೆಳೆಹಾನಿ ಮತ್ತು ೫೬೬.೭೧ ಹೆಕ್ಟರ್ ತೋಟಗಾರಿಕೆ ಬೆಳೆಹಾನಿ ಸೇರಿ ಒಟ್ಟು- ೭೩೮೧.೮೬ ಹೆಕ್ಟೇರ್ ಬೆಳೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಿಂದ ಅಂದಾಜು ಕೃಷಿ ಬೆಳೆ ಹಾನಿ ೧,೩೧,೪೯೦.೦೦ ಹೆಕ್ಟರ್ ಹಾಗೂ ತೋಟಗಾರಿಕೆ ಬೆಳೆ ಹಾನಿ ೬,೭೪೯.೦೦ ಹೆಕ್ಟರ್ ಸೇರಿ ಒಟ್ಟು ೧,೩೮,೨೩೯ ಹೇಕ್ಟರ್ ಬೆಳೆ ಹಾನಿಯ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ ಎಂದರು.

ನಾನು ಪಿಪಿಪಿ ಪರವಾಗಿಲ್

ನಾನು ಪಿಪಿಪಿ ಕಾಲೇಜ್ ಪರವಾಗಿಲ್ಲ. ವೈಯುಕ್ತಿಕ ಆಸಕ್ತಿಯೂ ಇಲ್ಲ. ನಾನು ಮಾಡಬೇಕಾದ ಬಿಎಲ್‌ಡಿಇ ವಿವಿಯಿಂದ ೧೦ ಮೆಡಿಕಲ್ ಕಾಲೇಜ್ ಮಾಡಬಹುದು. ಆದರೆ ಪಿಪಿಪಿ ವಿಷಯವಾಗಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಏಮ್ಸ್ ಕಾಲೇಜ್ ಸ್ಥಾಪನೆ ಬಗ್ಗೆ ಕೆಲವರು ಹೇಳುತ್ತಿದ್ದಾರೆ. ಏಮ್ಸ್ ಎಲ್ಲಿಯೂ ಆರಂಭಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಎಲ್ಲಿಯೂ ಏಮ್ಸ್ ಆರಂಭವಾಗಿಲ್ಲ. ಹೀಗಾಗಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು ಎಂದ ಸಚಿವ ಡಾ.ಎಂ.ಬಿ. ಪಾಟೀಲ, ಪಿಪಿಪಿ ಮಾಡೆಲ್ ಏನು ಎಂಬುದು ತಿಳಿದುಕೊಳ್ಳುವುದು ಅಗತ್ಯ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವ ಪ್ರಶ್ನೆಯೇ ಇಲ್ಲ. ನಾನು ಹೀಗೆಂದ ಮಾತ್ರಕ್ಕೆ ಅದರ ಪರವಾಗಿರುವೆ ಎಂದೇನಿಲ್ಲ, ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಬಗ್ಗೆ ನಾನು ಸಹ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುವೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಸಿಇಓ ರಿಷಿ ಆನಂದ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this