ಪ್ರತಿಯೊಬ್ಬರು ಕಾನೂನು ಅರಿವು ಹೊಂದಿ ಕಟ್ಟಕಡೆ ವ್ಯಕ್ತಿಗೆ ಸ್ಪಂದಿಸುವ ಕಾರ್ಯವಾಗಬೇಕು-ನ್ಯಾಯಾಧೀಶ ಹರೀಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.29 : ಕಾನೂನಿನ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಗ್ರಾಮ ಮಟ್ಟಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಉಚಿತ ಕಾನೂನು ಸೇವೆಗಳ ಕಾನೂನು ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗಳು ಅನುಭವಿಸುತ್ತಿರುವ ತೊಂದರೆಗಳಿಗೆ ಸ್ಪಂದಿಸುವ ಕೆಲಸಗಳಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಅವರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಬಿ.ಎಲ್.ಡಿ.ಇ ಕಾನೂನು ಶಾಲೆ, ಅಂಜುಮನ್ ಕಾನೂನು ಮಹಾವಿದ್ಯಾಲಯ, ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ, ಸಿದ್ದಸಿರಿ ಕಾನೂನು ಮಹಾವಿದ್ಯಾಲಯ, ಸಿಕ್ಯಾಬ್ ಕಾನೂನು ಮಹಾವಿದ್ಯಾಲಯ, ನಾಲತವಾಡ ಎ.ಎಸ್.ಎನ್. ಕಾನೂನು ಮಹಾವಿದ್ಯಾಲಯ, ಕಲಕೇರಿ ರಹೆಮತ್ ಬಿ.ಎ. ಸಿರಸಗಿ ಮೆಮೊರಿಯಲ್ ಕಾನೂನು ಮಹಾವಿದ್ಯಾಲಯ, ತಾಳಿಕೋಟೆ ಮಾತೋಶ್ರೀ ಕಮಲಾಬಾಯಿ ಸಿದ್ದಪ್ಪ ಕರಜಗಿ ಕಾನೂನು ಮಹಾವಿದ್ಯಾಲಯ ಹಾಗೂ ಸಿಂದಗಿ ಟಿ.ಎಸ್.ಪಿ ಮಂಡಳಿ ಕಾನೂನು ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನ್ಯಾಯವನ್ನು ಸಬಲೀಕರಣಗೊಳಿಸುವುದು ಕಾನೂನು ಸೇವೆಗಳಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಕುರಿತು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯವನ್ನು ನಿರ್ದಿಷ್ಟವಾಗಿ, ಸೂಕ್ತವಾದ ಕಾನೂನು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉಚಿತ ಕಾನೂನು ಸಹಾಯ ಸಲಹೆಗಳನ್ನು ನೀಡುವಂತಾಗಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಜಿಲ್ಲಾ ನ್ಯಾಯಾದೀಶ ಹೆಚ್ ಶಶಿಧರ ಶೆಟ್ಟಿ ಅವರು ಮಾತನಾಡಿ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆಯ ಕೆಲಸಗಾರರು, ಗುಂಪು ಘರ್ಷಣೆ, ಹಿಂಸಾಚಾರ, ಪ್ರವಾಹ, ಅನಾವೃಷ್ಟಿ, ಭೂಕಂಪ, ಕೈಗಾರಿಕಾ ನಾಶ ಇತ್ಯಾದಿಗಳ ಬಲಿಪಶು, ಕೋಮು ಘರ್ಷಣೆಗೆ ಬಲಿಯಾದವರು ಮಾನಸಿಕ ಅಥವಾ ಇತರ ಯಾವುದೇ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಸಂರಕ್ಷಣಾ ಮನೆ ಮಾನಸಿಕ ಆಸ್ಪತ್ರೆ ಇತ್ಯಾದಿಗಳ ವಶದಲ್ಲಿರುವ ವ್ಯಕ್ತಿಗಳು, ಬಂಧಿತ ಕಾರ್ಮಿಕರು ಮತ್ತು ಮಾನವ ಕಳ್ಳಸಾಗಣೆಯ ಬಲಿಪಶುಗಳು, ಎಲ್ಲಾ ವರ್ಗದ ವ್ಯಕ್ತಿಗಳು ಉಚಿತ ಕಾನೂನು ಸಹಾಯಕ್ಕೆ ಅರ್ಹರಾಗಿರುತ್ತಾರೆ. ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಸೇವಾ ಪ್ರಾಧಿಕಾರವು ಕಾನೂನು ಅರಿವು, ಕಾನೂನು ನೆರವು ಮತ್ತು ವಿವಾದಗಳ ಇತ್ಯರ್ಥವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಲೋಕ ಅದಾಲತ್, ರಾಜಿ ಸಂಧಾನ ಹಾಗೂ ಮಧ್ಯಸ್ಥಿಕೆಯಿಂದ ಕಾನೂನಿನ ಪರಿಹಾರ ಕಂಡುಕೊಳ್ಳುವುದು ಪ್ರಾಧಿಕಾರದ ಮುಖ್ಯ ಉದ್ದೇಶ ಮತ್ತು ಕಾರ್ಯಗಳಾಗಿವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಮಕ್ಕಳಂತಹ ಸಮಾಜದ ದುರ್ಬಲ ವರ್ಗಗಳನ್ನು ತಲುಪಲು ವಿವಿಧ ಕಾರ್ಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಕಾನೂನು ಅಭ್ಯಸಿಸುವ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದಿದ್ದು ವಿದ್ಯಾರ್ಥಿಗಳು ಗುಂಪುಗಳನ್ನು ರಚಿಸಿಕೊಂಡು ಪ್ರತಿಯೊಂದು ಗ್ರಾಮಗಳಿಗೂ ತೆರಳಿ ಈ ಕಾನೂನಿನ ಕುರಿತು ಸಮಗ್ರವಾಗಿ ಮಾಹಿತಿ ನೀಡಬೇಕು. ನಾಲ್ಕೈದು ಗ್ರಾಮಗಳ ಸಾರ್ವಜನಿಕರನ್ನು ಒಂದುಗೂಡಿಸಿ ಅಹವಾಲುಗಳನ್ನು ಆಲಿಸಬೇಕು ಕಾನೂನಿನ ಅರಿವು ಮೂಡಿಸುವುದರೊದಿಗೆ ವಿವಿಧ ಇಲಾಖೆಗಳ ಸೌಲಭ್ಯ ವಂಚಿತರ ಸಾರ್ವಜನಿಕರ ದೂರಿನ ಅನುಸಾರ ಸೂಕ್ತ ಪರಿಹಾರ ದೊರಕುವಂತೆ ದೂರು ಪ್ರಾಧಿಕಾರದ ಗಮನಕ್ಕೆ ತರಬೇಕು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುವಂತೆ ನೋಡಿಕೊಳ್ಳಬೇಕು. ಸಣ್ಣ ಪುಟ್ಟ ವ್ಯಾಜ್ಯಗಳಿದ್ದಲ್ಲಿ ಅವುಗಳನ್ನು ತಮ್ಮ ಹಂತದಲ್ಲಿಯೇ ಮದ್ಯಸ್ಥಿಕೆ ವಹಿಸಿ ಇತ್ಯರ್ಥಗೊಳಿಸಬೆಕು. ದೇಶದಲ್ಲಿ ಫೋಕ್ಸೊ ಪ್ರಕರಣಗಳು, ಡ್ರಗ್ಸ ದಂಧೆ ಹಾಗೂ ಹೇರಳವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದರ ನಿಯಂತ್ರಣಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಮಂಗಳೂರಿನ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶರಾದ ಜೈ ಶಂಕರ ಮಾತಾನಾಡಿ, ಕಾನೂನಿನ ಸೇವೆಗಳು ಹಾಗೂ ಅವಶ್ಯಕತೆ ಬಯಸಿದವರಲ್ಲಿಗೆ ತೆರಳಿ ಅವರುಗಳ ಸಮಸ್ಯೆಗಳಿಗೆ ಸ್ಪಂದಿಸುವುದೆ ಈ ಕಾನೂನಿನ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿಯೇ ಇರುವುದಿಲ್ಲ. ಈ ಕುರಿತು ತಾವು ವಿದ್ಯಾರ್ಥಿಗಳ ದಿಸೆಯಲ್ಲಿ ಪ್ರತಿಯೊಂದು ಯೋಜನೆಗಳ ಸಾರ್ವಜನಿಕರಲ್ಲಿ ಸಮರ್ಪಕವಾಗಿ ಯೋಜನೆಗಳ ಮಾಹಿತಿ ಹಾಗೂ ಎಲ್ಲ ಯೊಜನೆಗಳು ಲಾಭ ದೊರಕುವಂತಾಗಬೇಕು. ಅದರೊಂದಿಗೆ ಸಮಗ್ರವಾಗಿ ಕಾನೂನಿನ ನೆರವು ಹಾಗೂ ಅರಿವು ಮೂಡಿಸುವಂತಾಗಬೇಕು ನಮ್ಮಿಂದ ಯಾರಿಗೂ ತೊಂದರೆ ಯಾಗಬಾರದು ಹಾಗೂ ಮತ್ತೊಬ್ಬರಿಂದ ನಮಗೆ ತೊಂದರೆಯಾಗದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ ಗುಣಾರಿ ಮಾತನಾಡಿ, ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಆರೋಗ್ಯ ಯೋಜನೆಗಳು ಹಾಗೂ ಅವುಗಳ ಪ್ರಯೋಜನೆ ಕುರಿತು ವಿವರವಾಗಿ ಮಾತನಾಡಿರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಿ.ಬಿ. ಕುಂಬಾರ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಬಿ. ಬಿರಾದಾರ, ವಿವಿಧ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀ ಸಿದ್ದಸಿರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ದೇಸಾಯಿ ಸ್ವಾಗತಿಸಿದರು. ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ಎಸ್. ಸಂಜೆವಾಡಮಠ ವಂದಿಸಿದರು.

Share this