ಸಪ್ತಸಾಗರ ವಾರ್ತೆ, ವಿಜಯಪುರ, ಅ. 19:
ಜನಪದ ಸಾಹಿತ್ಯ ನಮ್ಮ ನಾಡಿನ ಬೇರು ಸಾಹಿತ್ಯವಾಗಿದ್ದು, ಇದರಲ್ಲಿಯ ತ್ರಿಪದಿ ,ಕಥೆ, ಖಂಡ ಕಾವ್ಯ ,ಲಾವಣಿ ಮುಂತಾದವುಗಳಲ್ಲಿ ಕಲ್ಯಾಣ ನಾಡಿನ ಶರಣರ ಕುರಿತು ಅಪರೂಪದ ಹಾಡುಗಳನ್ನು ನಾವು ಕಾಣುತ್ತೇವೆ. ಜನಪದರು ಬೆಳಿಗ್ಗೆ ಎದ್ದ ಕೂಡಲೇ ಬಸವಾದಿ ಶರಣರನ್ನು ನೆನೆಯುತ್ತಾ ತಮ್ಮ ಕಾಯಕವನ್ನು ಪ್ರಾರಂಭಿಸುತ್ತಾರೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ರಮೇಶ ತೇಲಿ ಅಭಿಪ್ರಾಯ ಪಟ್ಟರು.
ಅವರು ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ನಡೆದ
547ನಮನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶರಣರ ನೆನೆದರೆ ಸೆರಗಿಯ ಇಟ್ಟಂಗ ,ಅರಳು ಮಲ್ಲಿಗೆ ಮುಡಿದಂಗ, ಕಲ್ಯಾಣದ ಶರಣರ ನೆನೆ ಮನವೇ ಎಂದು ಹಾಡು ಹಾಡುತ್ತಾ, ಕಾಯಕ ಹಾಗೂ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಜನಪದರು ಶರಣರನ್ನು ನೆನೆಸಿದ್ದಾರೆ. ಬಸವಣ್ಣ, ಸಿದ್ದರಾಮೇಶ್ವರ , ಅಲ್ಲಮಪ್ರಭು, ಹಿಪ್ಪರಗಿಯ ಮಾಚಯ್ಯ, ಉಪ್ಪರಿಗೆಯ ಸಂಗಯ್ಯ, ಹಾವಿನಾಳದ ಕಲ್ಲಯ್ಯ, ಮೇದಾರಕ ಕೇತಯ್ಯ, ಗೋಲಗೇರಿಯ ಗೊಲ್ಲಾಳ ಮುಂತಾದ ಶರಣರನ್ನು ಕುರಿತು ಮನ ತುಂಬಿ ಹಾಡಿ, ಅವರ ಬದುಕಿನ ಚಿಂತನೆಗಳನ್ನು ನಮಗೆಲ್ಲ ತಿಳಿಸಿದ್ದಾರೆ. ಜನಪದ ಸಾಹಿತ್ಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕದ ನೆಲೆಯಲ್ಲಿ ಅರಳಿದ ಹೂವಾಗಿದೆ. .ಈ ಹೂವಿನಲ್ಲಿ ಅಪರೂಪದ ಶರಣ ಚಿಂತನೆಯ ಗಂಧವಿದೆ. ಇದನ್ನು ಆಸ್ವಾದಿಸುತ್ತಾ ಹೋದರೆ ಮನಸ್ಸು ತುಂಬಿ ಬರುತ್ತದೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ದಿಮೆದಾರರು, ಗಜಾನನ ಉತ್ಸವ ಮಂಡಳಿಯ ಅಧ್ಯಕ್ಷರು ಆದ ಅಶೋಕ ದೇಶಟ್ಟಿ ಅವರು ಮಾತನಾಡುತ್ತಾ ಶರಣರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಅವರ ಬದುಕಿನ ಚಿಂತನೆಗಳು ಇಂದಿಗೂ ನೂತನವಾಗಿವೆ. ಇವರನ್ನು ಕುರಿತು ಜನಪದರು ಭಕ್ತಿಯಿಂದ ನೆನೆಸಿದ್ದಾರೆ ಎಂದರು.
ಕಾರ್ಯಕ್ರಮದ ಭಕ್ತಿ ಸೇವೆಯನ್ನು ನೆರವೇರಿಸಿದ ಉದ್ದಿಮೆದಾರರು, ಅನ್ನದಾಸೋಹಿಗಳು ಆದ ಸಿದ್ದು ಜೋಗುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಸುನಿತಾ ಬಿರಾದಾರ ಪ್ರಾರ್ಥನೆಯನ್ನು ಹಾಡಿದರು. ಸಾಹಿತಿಗಳಾದ ಡಾ.ಮಲ್ಲಿಕಾರ್ಜುನ ಮೇತ್ರಿ ಸ್ವಾಗತ ಕೋರಿ ಅತಿಥಿಗಳನ್ನು ಪರಿಚಯಿಸಿದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ ಓ ಶಿರೂರ ನಿರೂಪಿಸಿದರು .
ಕಾರ್ಯಕ್ರಮದಲ್ಲಿ ವರದಾಂಜನೇಯ ದೇವಸ್ಥಾನದ ಅಧ್ಯಕ್ಷರಾದ ಬಿ .ಎನ್ .ಬಿರಾದಾರ,
ಕೋಶಾಧ್ಯಕ್ಷರಾದ ಎಸ್ .ಕೆ. ಬಿರಾದಾರ, ಅರ್ಚಕರಾದ ಮಲ್ಲಯ್ಯ ಸ್ವಾಮಿ ಹಿರೇಮಠ ,ಎಂ .ಕೆ. ಬಿಸನಾಳ,ಅರವಿಂದ ಗೊಬ್ಬರ , ಆಮಂತ್ರಣ ಪತ್ರಿಕೆ ಸೇವೆ ಮಾಡಿದ ನಾನಾಗೌಡ ಪಾಟೀಲ, ಕಮಲಾಕರ ಕುಮಟಗಿ, ಶ್ರೀಶೈಲ ಬೆಲ್ಲದ,ಲಕ್ಷ್ಮಣ ಮೇತ್ರಿ ,ಜಿ .ಡಿ. ಬಾಗೇವಾಡಿ, ಚಂದ್ರಶೇಖರ ಸರಸಂಬಿ, ಅಶೋಕ ಬನ್ನಟ್ಟಿ ,ಬಿ .ವಿ .ಪಾಟೀಲ, ಜಯಪ್ರಕಾಶ್ ಅಂಬಲಿ, ಪಾಯಣ್ಣ ಪಡಸಲಗಿ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜನಪದರು ಕಲ್ಯಾಣ ನಾಡಿನ ಶರಣರನ್ನು ನಿತ್ಯ ನೆನೆಯುತ್ತಾರೆ- ಡಾ. ರಮೇಶ ತೇಲಿ


