ಸಪ್ತಸಾಗರ ವಾರ್ತೆ, ವಿಜಯಪುರ, ಅ.28: ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ ಉದ್ದೇಶಿತ ಕೆಎಸ್ಡಿಎಲ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಮಂಗಳವಾರ ಕರ್ನಾಟಕ ಸೋಫ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರೂ ಆದ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಮಂಗಳವಾರ ಸಂಜೆ ಸ್ಥಳ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ನಾಡಗೌಡ ಅವರು ಮಾತನಾಡಿ, ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕೆಎಸ್ಡಿಲ್ ಕೈಗಾರಿಕೆ ಸ್ಥಾಪನೆಗೆ ಅವಶ್ಯಕವಿರುವ ಜಾಗವನ್ನು ಪರೀಶಿಲನೆ ನಡೆಸಲಾಗುತ್ತಿದ್ದು, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ.ಪಾಟೀಲ ಅವರು 50 ಎಕರೆ ಜಾಗ ಒದಗಿಸಲು ಒಪ್ಪಿಗೆ ಸೂಚಿಸಿ ಈಗಾಗಲೇ ಕೆಎಸ್ಡಿಎಲ್ ಸಂಸ್ಥೆಗೆ ಪತ್ರವನ್ನು ಸಹ ಬರೆದಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಯಿಂದ ಸುತ್ತಮುತ್ತಲಿರುವ ಜನರಿಗೆ ಉದ್ಯೊಗಾವಕಾಶ ಹಾಗೂ ಕಾರ್ಖಾನೆ ಸ್ಥಾಪನೆಗೆ ಅವಶ್ಯಕವಿರುವ ಕಾರ್ಮಿಕರ ಸಮಸ್ಯೆಯೂ ಆಗುವುದಿಲ್ಲ. ಹಾಗಾಗಿ ಸರ್ಕಾರಕ್ಕೆ ಈ ಕುರಿತು ಪ್ರಾಥಮಿಕ ಯೋಜನೆಯನ್ನು ಈಗಾಗಲೇ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರ ಸುರೇಶ ಚವಲರ, ಕಂದಾಯ ನಿರೀಕ್ಷಕ ಆನಂದ ಕುಲಕರ್ಣಿ ಸೇರಿದಂತೆ ಕೆಐಡಿಬಿ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಎಸ್ಡಿಎಲ್ ಕೈಗಾರಿಕೆ ಸ್ಥಾಪನೆಗೆ ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ ಸ್ಥಳ ಪರಿಶೀಲನೆ


