ಸಪ್ತಸಾಗರ ವಾರ್ತೆ, ವಿಜಯಪುರ, ನ.30: ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ವಿಶಿಷ್ಟವಾಗಿ ಮೂಡಿ ಬಂದಿದ್ದು, ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ಒಂದು ಸಾಹಿತ್ಯದ ಪ್ರಕಾರವಾಗಿದ್ದು, ಸರಳ ಭಾಷೆಯಲ್ಲಿ ಅತ್ಯಂತ ಗಹನವಾದ ವಿಚಾರಗಳನ್ನು ವ್ಯಕ್ತಪಡಿಸಿದ ವಚನ ಸಾಹಿತ್ಯದ ಮೂಲಕ ಶರಣ, ಶರಣೆಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವೆಲ್ಲ ನಡೆದಾಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ಕೂಡಗಿಯ ರಾಜ್ಯ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ ಪುರಸ್ಕೃತ ಬಸವರಾಜ ಜಾಲವಾದಿ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ.ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾರಂಗ ಮಠ ದತ್ತಿ. ಬಸವನಬಾಗೇವಾಡಿ ಶ್ರೀ ಬಸವೇಶ್ವರ ದೇವಾಲಯ ಸಂಸ್ಥೆಯ ದತ್ತಿ. ಮಾತೋಶ್ರೀ ಈರವ್ವ ಮಲ್ಲಪ್ಪ ಹಣಮಶೆಟ್ಟಿ ದತ್ತಿ ಹಾಗೂ ದಿ.ಕಾಶಿನಾಥ ಸಿದ್ಧಮಲ್ಲಪ್ಪ ಇಂಗಳೇಶ್ವರ ದತ್ತಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣ, ಶರಣೆಯರ ವಚನಗಳು ಅನುಭಾವ, ಆತ್ಮವಿಮರ್ಶೆ, ಸಾಮಾಜಿಕ ಪ್ರಜ್ಞೆಯನ್ನು ನೀಡಿದ್ದು, ಸಮಾನತೆ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯದಂತಹ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ವಿಶಿಷ್ಟ ಸಾಹಿತ್ಯದ ಪ್ರಕಾರವಾಗಿ ಈ ವಚನ ಸಾಹಿತ್ಯ ಬೆಳೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜಯಪುರ ನವಬಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ.ಎಸ್ ಖೊದ್ನಾಪುರ ಮಾತನಾಡಿ, ನಾನು, ನನ್ನದು,ನನ್ನಿಂದಲೇ ಎಂಬ ಅಹಂಭಾವ ತೊರೆದಾಗ ಮಾತ್ರ, ನಮ್ಮೆಲ್ಲರ ನಡೆ-ನುಡಿಗಳು ಒಂದಾದಾಗ ಮಾತ್ರ ಆದರ್ಶ ಶರಣರಾಗಲು ಸಾಧ್ಯ ಎನ್ನುತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಡೀ ಕನ್ನಡ ನಾಡಿಗೆ ಅತ್ಯುತ್ತಮವಾದ ರಸದೌತಣವನ್ನು ಉಣಬಡಿಸುತ್ತಿರುವ ಶ್ರೇಷ್ಠ ಕಾಯಕ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದರು.
“ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಸರೋಜಿನಿ ಮಾವಿನಮರ ಮಾತನಾಡಿ, ಆಡಂಭರಗಳಿಲ್ಲದ, ತಾರತಮ್ಯಗಳಿಲ್ಲದ, ಇದ್ದದ್ದನ್ನು ಇದ್ದ ಹಾಗೆ ಹೇಳಿ ಹೋದ ವಚನಕಾರರ ವಚನಗಳೇ ಇಂದು ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ ಎಂದರು.
“ಕಾಯಕಯೋಗಿ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ” ಹಾಗೂ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಕುರಿತು ಉಪನ್ಯಾಸ ನೀಡಿದ ಪರವೀನಬಾನು ಶೇಖ ಮಾತನಾಡಿ, ಹಗ್ಗ ಹೊಸೆದು ಅದರಿಂದ ಬಂದ ಆದಾಯದಿಂದಲೇ ದಾಸೋಹ ಮಾಡಿ ಗುರು,ಲಿಂಗ, ಜಂಗಮದ ಸೇವೆಯನ್ನು ಮಾಡಬೇಕೆಂದರು. “ಚಂದೇಶ್ವರಲಿಂಗ” ಎಂಬ ಅಂಕಿತದೊಂದಿಗೆ ರಚಿಸಿದ ತಮ್ಮ೪೮ ವಚನಗಳಲ್ಲಿಯೂ ಸಹ ಕಾಯಕದ ಮಹತ್ವವನ್ನು ಬಿತ್ತರಿಸಿದ್ದಾರೆ ಎಂದರು. ಎಡೆಯೂರು ಸಿದ್ಧಲಿಂಗೇಶ್ವರ ಕುರಿತು ಉಪನ್ಯಾಸ ನೀಡಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿವಾನಂದ ಡೋಣೂರ, ಸಿದ್ರಾಮಯ್ಯ ಲಕ್ಕುಂಡಿಮಠ, ಜಯಶ್ರೀ ಹಿರೇಮಠ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.
ಕಸಾಪ ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ ಸ್ವಾಗತಿಸಿ ಗೌರವಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶಿಕ್ಷಕ ರಿಯಾಜ ಪಿಂಜಾರ ವಂದಿಸಿದರು. ಶಿಕ್ಷಕ ಮೆಹತಾಬ ಕಾಗವಾಡ ಕನಕದಾಸರ ಕುರಿತ ದಾಸರಪದ ಸಾದರಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಿ.ಕೆ.ಗೋಟ್ಯಾಳ, ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ,ಎಸ್.ಎಲ್.ಇಂಗಳೇಶ್ವರ, ಸುಖದೇವಿ ಅಲಬಾಳಮಠ, ಎ.ಎಂ.ಹಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಕೆ.ಎಚ್.ಹಣಮಾಣಿ, ಶ್ರೀಕಾಂತ ನಾಡಗೌಡ, ಶಿವಾಜಿ ಮೋರೆ, ಶಿವಪುತ್ರ ಅಂಕದ, ಬಸವರಾಜ ಮೇಟಿ, ಎಸ್.ಎಂ.ಬಿರಾದಾರ,
ಇಸಾಕ ಜಹಾಗೀರದಾರ, ಫಕ್ರುದ್ದೀನ್ ಅಲಿಅಹ್ಮದ ಹಿರೇಕೊಪ್ಪ, ಬಸನಗೌಡ ಬಿರಾದಾರ,ಸಿದ್ದು ಬೀಳಗಿ, ಅಮೋಘಸಿದ್ಧ ಪೂಜಾರಿ, ಚಂದ್ರಶೇಖರ ಹೂವಿನಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಚನಗಳಿಂದ ಸಮ ಸಮಾಜದ ನಿರ್ಮಾಣ ಸಾಧ್ಯ- ಬಸವರಾಜ ಜಾಲವಾದಿ


