ಬಬಲೇಶ್ವರದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶ ಕೈಬಿಡಿ: ಶ್ರೀಗಳ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28:
ಬಸವ ಸಂಸ್ಕೃತಿ ಅಭಿಯಾನದ ವಿರುದ್ಧ, ಸ್ವಾಮೀಜಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಕನ್ಹೇರಿ ಶ್ರೀಗಳ ಬೆಂಬಲವಾಗಿ ನಿಂತು ಯಾವ ಸ್ವಾಮೀಜಿಯವರ ಬೆಂಬಲವಿಲ್ಲದೇ ಬಬಲೇಶ್ವರದಲ್ಲಿ ಸಮಾವೇಶ ಮಾಡಲು ಹೊರಟವರಿಗೆ ಏನೆಂದು ಕರೆಯಬೇಕು? ಎಂದು ಸಮಾವೇಶ ಆಯೋಜಿಸಿದರನ್ನು ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗಳು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಭಾನುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ಅವರು, ಯಾವ ಧರ್ಮದಲ್ಲೂ ದ್ವೇಷ ಮಾಡುವಂತದನ್ನು ಹೇಳಿಲ್ಲ. ಪ್ರೀತಿ, ವಾತ್ಸಲ್ಯ, ಸಹಬಾಳ್ವೆ ಕುರಿತು ಎಲ್ಲ ಪರಂಪರೆಗಳು ತಿಳಿಸುತ್ತವೆ. ಆದರೆ, ಸನ್ಮಾರ್ಗ ತೋರುವ ಸ್ವಾಮೀಜಿಗಳೇ ಇಂದು ಜನರ ಮುಂದೆ ನಗೆಗೀಡಾಗುವ ಪ್ರಸಂಗ ಬಂದಿದೆ. ಇದರಿಂದ ಸ್ವಾಮೀಜಿಗಳಿಗೆ ಜನರ ಎದುರು ನಿಲ್ಲಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಶಿವಯೋಗ ಮಂದಿರದ ಕುರಿತು ಮಾತನಾಡಿ, ಎಲ್ಲ ಸ್ವಾಮೀಜಿಯವರಿಗೆ ನೋವುನುಂಟು ಮಾಡಿದ್ದಾರೆ. ಮುಂದುವರೆದು ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಕನ್ಹೇರಿ ಶ್ರೀಗಳ ಬೆಂಬಲಕ್ಕೆ ನಿಂತು ಬಬಲೇಶ್ವರದಲ್ಲಿ ನಡೆಯುತ್ತಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ 300 ಜನ ಮಠಾಧೀಶರು ಬರುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾರೆ. ಇವರಿಗೆ ಅವಾಚ್ಯ ಶಬ್ದಗಳಿಂದ ಮತ್ತು ಸುಪ್ರಿಂ ಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡವರ ಬೆಂಬಲಕ್ಕೆ ವೀರಶೈವ ಲಿಂಗಾಯತ ಮಠಾಧಿಪತಿಗಳು ಬೆಂಬಲಿಸುವುದಿಲ್ಲ. ಸ್ವಾಮಿಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸ್ವಾಮಿಯೊಬ್ಬರ ವೈಭವೀಕರಣ ಮಾಡಲು ಮತ್ತು ರಾಜಕೀಯ ಉದ್ದೇಶಕ್ಕಾಗಿ ಈ ಸಮಾವೇಶ ಮಾಡುತ್ತಿದ್ದಾರೆ. ನಿಜವಾದ ಸ್ವಾಮಿಗಳು ಯಾರೂ ಕೂಡ ಇದರಲ್ಲಿ ಭಾಗಿಯಾಗುವುದಿಲ್ಲ.
ಸಮಸ್ಯೆಗಳಿಗೆ ಪರಿಹಾರ ಎಲ್ಲ ಮಠಾಧೀಶರು ಒಂದೆಡೆ ಸೇರಿ ಬಗೆಹರಿಸುವ ಕಾರ್ಯ ಆಗಬೇಕೆ ವಿನಃ ಸಮಾವೇಶದಿಂದ ಜನರ ಎದುರು ನಮ್ಮ ಅಸ್ತಿತ್ವ ಕಳೆದುಕೊಂಡಂತಾಗುತ್ತದೆ. ಈ ಸಮಾವೇಶ ರದ್ದುಗೊಳಿಸಬೇಕು. ಸಮಾಜದ ಕಲ್ಯಾಣ, ಜನರ ಕಲ್ಯಾಣಕ್ಕೆ ಮುಂದಾಗುವುದನ್ನು ಬಿಟ್ಟು ರಾಜಕಾರಣ ಮಾಡಬಾರದು ಎಂದು ಮಮದಾಪುರ ವಿರಕ್ತ ಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗಳು ತಿಳಿಸಿದ್ದಾರೆ.
ಮಸಬಿನಾಳದ ಸಿದ್ಧರಾಮ ಶಿವಯೋಗಿಗಳು ಮಾತನಾಡಿ, ಆತ್ಮೀಯತೆ ಕಂಡುಕೊಂಡಂತಹ ಬಸವಣ್ಣನವರ ಹೆಸರನ್ನು ಬಳಸಿಕೊಂಡು ಸಮಾವೇಶ ಮಾಡಲು ಹೊರಟಿರುವುದು ಬೇಸರದ ಸಂಗತಿ. ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಸಂಸ್ಕಾರದಲ್ಲಿ ಬೆಳೆದರು ಸನ್ಮಾರ್ಗದಲ್ಲಿ ಸಾಗುತ್ತಿದ್ದಾರೆ. ಆದರೆ, ಇವರು ಸಿದ್ದೇಶ್ವರ ಶ್ರೀಗಳು ನೀಡಿದ ಸಂಸ್ಕಾರಕ್ಕೆ ಧಕ್ಕೆ ತಂದು ಸಮಾಜದಲ್ಲಿ ಸ್ವಾಮೀಜಿಗಳಿಗೆ ಬೆಲೆ ಇಲ್ಲದಂತೆ ಮಾಡಲು ಹೊರಟಿರುವ ಕನ್ಹೇರಿ ಶ್ರೀಗಳಿಗೆ ಅವಾಚ್ಯ ಶಬ್ದಗಳ ಬಳಕೆಯನ್ನು ಮಾಡುವವರು ಸ್ವಾಮೀಗಳಾಗಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಛೀಮಾರಿಗೆ ಒಳಗಾಗಿರುವ ಸ್ವಾಮಿಜಿಯ ಬೆಂಬಲಕ್ಕೆ ನಿಂತು ಸಮಾವೇಶದಲ್ಲಿ ಭಾಗವಹಿಸಲು ನಿಜವಾದ ಸ್ವಾಮಿಗಳು ಮುಂದೆ ಬರುವುದಿಲ್ಲ. ಇದರಿಂದ ಈ ಸಮಾವೇಶ ಕೇವಲ ರಾಜಕೀಯ ಕಾರಣಕ್ಕೆ ನಡೆಯುವ ರಾಜಕಾರಣದ ಸಮಾವೇಶ ಆಗಿದೆ ಹೊರತು ಧರ್ಮದ ಸಮಾವೇಶ ಅಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ.
ಸಮಾಜ ಮಠಾಧೀಶರಿಂದ ಹಾಳಾಗುತ್ತಿದೆ ಎಂಬ ಕಲ್ಪನೆ ಯಾರಲ್ಲೂ ಬರದಂತೆ ನೋಡಿಕೊಳ್ಳಿ ಇದನ್ನು ಇಷ್ಟಕ್ಕೆ ಈ ಸಮಾವೇಶವನ್ನು ಕೈಬಿಟ್ಟು ಒಳ್ಳೆಯ ಮಾರ್ಗದಲ್ಲಿ ಸಾಗಿರಿ. ಇಲ್ಲವಾದಲ್ಲಿ ನಾಡಿನ ಲಿಂಗಾಯತ ಮಠಾಧೀಶರು ಒಕ್ಕೂಟದ ಸ್ವಾಮೀಜಿಗಳೆಲ್ಲರೂ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಣದಾಳದ ಡಾ. ವಿವೇಕಾನಂದ ದೇವರು ಮಾತನಾಡಿ, ದೊಡ್ಡ ಮಠಾಧೀಶರು ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿದ್ದರೆ ನಮ್ಮಂಥಹ ಕಿರಿ ಮಠಾಧೀಶರು ಅವರಿಂದ ಏನನ್ನು ಕಲಿಯಬೇಕು? ಕಳೆದ ಹತ್ತು ವರ್ಷಗಳಿಂದ ಪುರಾಣ, ಪ್ರವಚನಗಳನ್ನು ಮಾಡುತ್ತಿರುವ ನಮಗೆ ಅವಾಚ್ಯ ಶಬ್ದಗಳ ಬಳಕೆ ಸಾಧ್ಯವಿಲ್ಲ ಏಕೆ? ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ಬೇಲಿಯೇ ಎದ್ದು ಹೊಲವನ್ನೆ ಮೇಯ್ದರೆ ಹೇಗೆ? ಬಬಲೇಶ್ವರದಲ್ಲಿ ಕೈಗೊಳ್ಳುತ್ತಿರುವ ಹಿಂದೂ ಸಮಾವೇಶ ಬದಲಾಗಿ ಬಸವಾದಿ ಶರಣರ ಹಿಂದೂ ಸಮಾವೇಶ ಎಂದು ಪದವನ್ನೇ ಏಕೆ ಬಳಸಿದರು? ಅವಾಚ್ಯ ಪದಬಳಕೆ ಸ್ವಾಮೀಜಿಗಳಿಗೆ ಶೋಭೆ ತರುವುದಿಲ್ಲ. ಇಂತವರನ್ನು ಬೆಂಬಲಿಸಿದರೆ ಸ್ವಾಮೀಜಿಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಯಾರೂ ಕೂಡ ಸಮಾವೇಶದಲ್ಲಿ ಭಾಗವಹಿಸಬೇಡಿ ಎಂದು ತಿಳಿಸಿದರು.

Share this