ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಗೆ ನೀಡಿದ ಕೊಡುಗೆ ಅಪಾರ -ಡಾ.ಔದ್ರಾಮ್

ಸಪ್ತಸಾಗರ ವಾರ್ತೆ, ವಿಜಯಪುರ, ಜ.1: ಅಮರ ಶಿಲ್ಪಿ ಜಕಣಚಾರಿ ಅವರ ಶ್ರದ್ಧೆ ಹಾಗೂ ಅವರು ಕಲೆಗೆ ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಲ್ಪಕಲೆಯ ಇತಿಹಾಸದಲ್ಲಿ ಅಜರಾಮರಾಗಿರುವ ಅಮರಶಿಲ್ಪಿ ಜಕಣಾಚಾರಿ ಅವರು ಕಲ್ಲಿನಲ್ಲಿ ಜೀವ ತುಂಬಿದ ಮಹಾನ್ ಶಿಲ್ಪಿ, ಹೊಯ್ಸಳ ಯುಗದ ಶಿಲ್ಪಕಲೆಗೆ ಶಾಶ್ವತವಾದ ಕೀರ್ತಿ ತಂದ ಮಹಾನ್ ಕಲಾವಿದರು. ಶಿಲ್ಪಕಲೆ, ಸಂಸ್ಕೃತಿ ಹಾಗೂ ಇತಿಹಾಸದ ಕುರಿತು ಅಮರಶಿಲ್ಪಿ ಜಕಣಾಚಾರಿ ಭಾರತೀಯ ಶಿಲ್ಪಕಲೆಗೆ ವಿಶ್ವಮಟ್ಟದ ಹೆಗ್ಗುರುತನ್ನು ತಂದ ಮಹಾನ್ ಕಲಾವಿದ. ಅವರ ಕಲಾ ಪರಂಪರೆ ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಹೆಮ್ಮೆಯಾಗಿದೆ. ಅದ್ಭುತ ಶಿಲ್ಪಕಲೆ ಮತ್ತು ಕೊಡುಗೆಗಳನ್ನು ಸರಿಸುವ ನಿಟ್ಟಿನಲ್ಲಿ ಸರ್ಕಾರ ಈ ಮಹನೀಯರ ಜvಯಂತಿ ಆಚರಣೆ ಮಾಡುವ ಮೂಲಕ ಅವರ ಕಲಾ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಡಾ. ಡಿ.ಎನ್. ಧರಿ ಅವರು, ಶತ ಶತಮಾನಗಳುರಿಳಿದರೂ ಶಿಲ್ಪಕಲೆಗಳು ಎಂದಿಗೂ ಜೀವಂತವಾಗಿವೆ ಎಂದು ಹೇಳಿದರು.
ರೈತರು ದೇಶದ ಬೆನ್ನೆಲುಬು ಆಗಿದ್ದರೆ ಆ ರೈತರ ಬೆನ್ನೆಲಬು ನಮ್ಮ ವಿಶ್ವಕರ್ಮ ಶಿಲ್ಪಕಾರರಾಗಿದ್ದಾರೆ. ಹೊಯ್ಸಳ ರಾಜರ ಕಾಲದಲ್ಲಿ ಅರಮನೆಯ ಪ್ರಧಾನ ಶಿಲ್ಪಿಯಾಗಿದ್ದ ಜಕಣಾಚಾರಿ ಅವರು ದೇವಾಲಯ ಶಿಲ್ಪಕಲೆಗೆ ವಿಶಿಷ್ಟ ಶೈಲಿ ನಯವಾದ ಕೆತ್ತನೆ ಮತ್ತು ದೈವಿಕ ಭಾವನೆಗಳನ್ನು ನೀಡಿದವರು ಎಂದರು.
ಬೇಲೂರು, ಹಳೇಬೀಡು ಸೇರಿದಂತೆ ಅನೇಕ ಐತಿಹಾಸಿಕ ದೇವಾಲಯಗಳ ಶಿಲ್ಪಗಳು ಅವರ ಕಲಾತ್ಮಕತೆಯ ಜೀವಂತ ಸಾಕ್ಷಿಗಳಾಗಿವೆ. ಪ್ರತಿಯೊಂದು ಶಿಲ್ಪದಲ್ಲೂ ಮಾನವೀಯ ಭಾವನೆ, ಸೂಕ್ಷ್ಮ ಕಲಾತ್ಮಕತೆ ಕಟ್ಟಿಕೊಡುವಲ್ಲಿ ಅಪಾರ ತಾಳ್ಮೆ ಸ್ಪಷ್ಟವಾಗಿ ಕಾಣಿಸುತ್ತದೆ. ಜಕಣಾಚಾರಿಯವರ ಜೀವನ ಕೇವಲ ಶಿಲ್ಪಕಲೆಯ ಸಾಧನೆಯಷ್ಟೇ ಅಲ್ಲದೇ, ಶ್ರಮ, ಶಿಸ್ತು ಮತ್ತು ಆತ್ಮಸಮರ್ಪಣೆಯ ಪ್ರತೀಕವಾಗಿದೆ. ನ್ಯಾಯ ಮತ್ತು ನಿಷ್ಠೆಗಾಗಿ ತೀವ್ರ ತ್ಯಾಗಕ್ಕೆ ಸಿದ್ಧರಾದ ಅವರ ಕಥೆ, ಇಂದಿಗೂ ಜನಮಾನಸದಲ್ಲಿ ಆಳವಾದ ಪ್ರಭಾವ ಬೀರಿದೆ ಇದು ವೃತ್ತಿಪರ ನೈತಿಕತೆ ಹಾಗೂ ಸತ್ಯನಿಷ್ಠೆಯ ಶ್ರೇಷ್ಠ ಉದಾಹರಣೆಯಾಗಿ ಉಳಿದಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೈಚಳಕದ ಮಹತ್ವವನ್ನು ಜಕಣಾಚಾರಿಯವರ ಶಿಲ್ಪಕಲೆ ನಮಗೆ ಸ್ಮರಿಸುತ್ತದೆ. ಯುವ ಪೀಳಿಗೆಯು ಅವರ ಜೀವನದಿಂದ ಶ್ರಮ, ಶಿಸ್ತು ಮತ್ತು ಸೃಜನಶೀಲತೆಯನ್ನು ಕಲಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಮರಶಿಲ್ಪಿ ಜಕಣಾಚಾರಿಯವರ ಕಲಾ ಪರಂಪರೆ ಕೇವಲ ಕಲ್ಲಿನಲ್ಲಿ ಅಷ್ಟೇ ಅಲ್ಲದೇ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳಲ್ಲಿ ಜೀವಂತವಾಗಿದ್ದು, ಮುಂದಿನ ಪೀಳಿಗೆಯಲ್ಲಿಯೂ ಶಾಶ್ವತವಾಗಿ ಉಳಿಯಲಿ ಎಂಬ ಆಶಯವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಚಂದ್ರಕಾಂತ ಕುಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಜಿಲ್ಲಾ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳಾದ ಮಲ್ಲಿನಾಥ ಕುಸುನೂರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಮಹೇಂದ್ರ ಸ್ವಾಮಿಜಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಅಮರ ಶಿಲ್ಪಿ ಜಕಣಚಾರ್ಯರ ಭಾವಚಿತ್ರದ ಮೆರವಣಿಗೆಗೆ ಚಾಲನೆ ದೊರೆತು, ಭವ್ಯ ¨ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ, ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Share this