ಸಪ್ತಸಾಗರ ವಾರ್ತೆ ವಿಜಯಪುರ, ಜ. 11:
ಗಂಗಾ ಕಲ್ಯಾಣ ಯೋಜನೆಯನ್ನು ಬಂದ್ ಮಾಡುವ ಹುನ್ನಾರ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಅನುಕೂಲಕರವಾಗಿರುವ ಗಂಗಾ ಕಲ್ಯಾಣ ಯೋಜನೆಗೆ ಎಳ್ಳು ನೀರು ಬಿಡುವ ಸುಳಿವು ಜಿಗಜಿಣಗಿ ಅವರಿಗೆ ಗೊತ್ತಾಗಿದೆ. ಜಿಗಜಿಣಗಿ ಅವರು ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ವೇಳೆ ಜಾರಿಗೆ ಬಂದ ಈ ಗಂಗಾ ಕಲ್ಯಾಣ ಯೋಜನೆಯ ಅನುದಾನವನ್ನು ಪಂಚ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಭಾರಿ ಹುನ್ನಾರ ನಡೆಸಿರುವ ಸುಳಿವು ಪಡೆದ ಜಿಗಜಿಣಗಿ ಅವರು ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಗಂಗಾ ಕಲ್ಯಾಣ ಯೋಜನೆ ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲ ಬಡವರಿಗೆ ಅನುಕೂಲಕರವಾದ ಯೋಜನೆಯಾಗಿತ್ತು. ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದ ವೇಳೆ ಜಾರಿಗೆ ಬಂದ ಈ ಮಹತ್ವದ ಯೋಜನೆಯಿಂದ ಲಕ್ಷಾಂತರ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಸಿದ್ಧರಾಮಯ್ಯ ಸರ್ಕಾರ ಈ ಯೋಜನೆಗೆ ಎಳ್ಳು ನೀರು ಬಿಡುವ ಪ್ರಯತ್ನ ಮಾಡುವ ಮೂಲಕ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಂಗಾ ಕಲ್ಯಾಣ ಯೋಜನೆ ರೈತರಿಗೆ ಒಂದು ವರದಾನವಾಗಿತ್ತು, ಬೋರವೆಲ್ ಕೊರೆಯಿಸಲು ಸಾಧ್ಯವಾಗದ ಬಡ ರೈತರು ಈ ಯೋಜನೆ ಮೂಲಕ ಬೋರವೆಲ್ ಕೊರೆಯಿಸಿಕೊಳ್ಳುತ್ತಿದ್ದರು, ಪರಿಣಾಮವಾಗಿ ಪ್ರತಿವರ್ಷ 15 ಸಾವಿರಕ್ಕೂ ಹೆಚ್ಚು ಜನರು ಈ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಯಾಗುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈ ಯೋಜನೆಗೆ ಆದ್ಯತೆ ನೀಡದೇ ಒಂದು ರೀತಿ ಬೇಜವಾಬ್ದಾರಿತನಿಂದ ವರ್ತಿಸುತ್ತಿದೆ. ದಲಿತ ಪರ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರ ದಲಿತ ಬಾಂಧವರ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದೆ. ಪ್ರತಿ ವರ್ಷ ಸುಮಾರು 10 ರಿಂದ 12 ಸಾವಿರ ದಲಿತ ರೈತರಿಗೆ ಅನುಕೂಲವಾಗುತ್ತಿದ್ದ ಈ ಯೋಜನೆಗೆ ಆದ್ಯತೆ ನೀಡದೇ ಈ ಎಲ್ಲ ರೈತರನ್ನು ಯೋಜನೆಯಿಂದ ವಂಚಿತರನ್ನಾಗಿಸಿದೆ. ಆ ಮೂಲಕ ಆರ್ಥಿಕವಾಗಿ ದಲಿತರನ್ನು ಇನ್ನೂ ಹಿಂದಕ್ಕೆ ತಳ್ಳುವ ಎಲ್ಲ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರ ನಿರತವಾಗಿದೆ ಎಂದು ಅವರು ಟೀಕಿ ಸಿದ್ದಾರೆ.
ಹಿಂದೆ ನಾನು ರಾಜ್ಯ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತಂದಿದ್ದೆ. ರಾಜ್ಯ ಸರ್ಕಾರ ತಮ್ಮ ಪಂಚ ಗ್ಯಾರೆಂಟಿ ಯೋಜನೆಯ ತಮ್ಮ ಹಣಕಾಸಿನ ಅಗತ್ಯ ಪೂರೈಸಲು ಗಂಗಾ ಕಲ್ಯಾಣ ಯೋಜನೆ ಹಣವನ್ನು ಉಪಯೋಗಿಸುತ್ತಿದ್ದಾರೆ. ಈಗಾಗಲೇ ಸುಮಾರು 42,000 ಕೋಟಿ ರೂಪಾಯಿ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು 187 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದೆ. ಈಗ ಸಣ್ಣ ರೈತರ ಗಂಗಾ ಕಲ್ಯಾಣ ಯೋಜನೆಗೂ ಕೊಡಲಿ ಪೆಟ್ಟು ನೀಡಿದೆ. 2023-24ರಲ್ಲಿ ಕೇವಲ 4000 ಕೊಳವೆ ಬಾವಿಗಳನ್ನು ಕೊರೆದರೆ, 2024-25ರಲ್ಲಿ ಕೇವಲ 3000 ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರವೆಲ್ ಕೊರೆಯಿಸಲಾಗಿದೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖ ಮಾಡಿ ಯೋಜನೆಯನ್ನೇ ಬಂದ್ ಮಾಡುವ ಹುನ್ನಾರದಲ್ಲಿದೆ ಎಂದು ಸಂಸದ ಜಿಗಜಿಣಗಿ ಹೇಳಿದ್ದಾರೆ.
ಗಂಗಾ ಕಲ್ಯಾಣ ಯೋಜನೆ ಕೈ ಬಿಡುವ ಹುನ್ನಾರ ನಡೆದಿದ್ಯಾ?: ಸಂಸದ ಜಿಗಜಿಣಗಿ ಹೇಳಿದ್ದೇನು ಗೊತ್ತಾ?


