ಓದು ಬರಹ ಜತೆ ಸೃಜನಶೀಲ ಅಭಿವ್ಯಕ್ತಿಗೆ ಆದ್ಯತೆ ನೀಡಿ- ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಫೆ. 24: ಮಕ್ಕಳು ಓದು ಬರಹದ ಜೊತೆಗೆ ಸೃಜನಶೀಲ ಅಭಿವ್ಯಕ್ತಿಗೆ ಆದ್ಯತೆ ನೀಡಬೇಕು. ಶಾಲಾ ಚಟುವಟಿಕೆಗಳು ಮಕ್ಕಳ ಸವಾಂಗೀಣ ವಿಕಾಸಕ್ಕೆ ಪೂರಕವಾಗಿದ್ದು, ಮಕ್ಕಳು ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಿಎಡ್ ಪ್ರಶಿಕ್ಷಣಾರ್ಥಿಗಳ ಒಂದು ತಿಂಗಳ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಅಕ್ಷರಾಭ್ಯಾಸ ಜತೆಗೆ ಮಕ್ಕಳಿಗೆ ಸಂಸ್ಕಾರ ಕೊಡುವುದು ಸಹ ಒಂದು ಶಿಕ್ಷಣ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸದ್ಗುಣಗಳನ್ನು ರೂಢಿಸಿ ಸನ್ಮಾರ್ಗದಲ್ಲಿ ಬೆಳೆಸುವ ನಿಟ್ಟಿನಲ್ಲಿ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಪಾಲಕರು ತಮ್ಮ ನಡವಳಿಕೆಯ ಮೂಲಕ ಮಕ್ಕಳಿಗೆ ಆದರ್ಶವಾಗಬೇಕು ಎಂದು ಹೇಳಿದರು.
ಶಿಕ್ಷಕ ಎಸ್.ಎಸ್.ಅರಬ ಮಾತನಾಡಿ, ಮಗುವಿನಲ್ಲಿಯ ಪ್ರತಿಭೆ ಎಂಬ ಶಕ್ತಿ ಸ್ಫುರಿಸಲು ತಾಯಿ-ತಂದೆ ಪಾತ್ರ ಮುಖ್ಯ.
ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ. ಹಾಗಾಗಿ ಮಗುವಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹು ಮಹತ್ವವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಆಯ್. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯು ಮಗುವಿಗೆ ಜ್ಞಾನದ ಜೊತೆಗೆ, ಜೀವನವನ್ನು ಎದುರಿಸುವ ಆತ್ಮವಿಶ್ವಾಸವನ್ನು ನೀಡುತ್ತದೆ. ಇಲ್ಲಿ ಶಿಸ್ತು, ಮೌಲ್ಯ, ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿ, ಮಕ್ಕಳ ವ್ಯಕ್ತಿತ್ವ ವಿಕಸನದ ಜತೆಗೆ ಭವಿಷ್ಯದ ಬದುಕಿಗೆ ಸಿದ್ಧಗೊಳಿಸಲಾಗುತ್ತದೆ ಎಂದು ಹೇಳಿದರು. 
ಶಿಕ್ಷಕರಾದ ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತರಬೇತಿ ಪೂರ್ಣಗೊಳಿಸಿದ ಡಿ ಎಡ್ ಪ್ರಶಿಕ್ಷಣಾರ್ಥಿಗಳಾದ ಮುಸ್ಕಾನ ಮಂಕಣಿ, ಸಾನಿಯಾ ಪಠಾಣ, ಜುಬಿಯಾ ಬಾಗವಾನ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

Share this