ಸಪ್ತಸಾಗರ ವಾರ್ತೆ,ಇಂಡಿ, ಮೇ. 10: ಸುಖ-ದುಃಖ, ಅಂಬಲಿ-ಅಮೃತ, ಶತ್ರು-ಮಿತ್ರ, ಸ್ತುತಿ-ನಿಂದನೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿದ ಹೇಮರೆಡ್ಡಿ ಮಲ್ಲಮ್ಮಳ ಬದುಕು ಇಂದಿಗೂ ಅನುಕರಣೀಯ ಹಾಗೂ ಮನುಕುಲಕ್ಕೆ ಆದರ್ಶ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ರವಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಶಿವಶರಣೆ ಮಲ್ಲಮ್ಮಳ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸಮಾಜದ ಪ್ರತಿಯೊಬ್ಬರೂ ಮಹಾಸಾದ್ವಿ ಮಲ್ಲಮ್ಮಳ ಆದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವಳ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ದಾರಿದೀಪ ಎಂದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ,ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ. ಸಮಸ್ಯೆ-ಸಂಕಷ್ಟಗಳ ನಡುವೆಯೂ ಮಲ್ಲಮ್ಮ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಜೀವನ ಸಮೃದ್ಧವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನ ನಡೆಸಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರ ಆತ್ಮಬಲ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಆಶಿಸಿದರು.
ಶಿಕ್ಷಕರಾದ ನಿಂಗಪ್ಪ ನಾವದಗಿ, ಶಾಂತೇಶ ಹಳಗುಣಕಿ ಮತ್ತಿತರರು ಇದ್ದರು.
ಹೇಮರೆಡ್ಡಿ ಮಲ್ಲಮ್ಮಳ ಬದುಕು ಮನುಕುಲಕ್ಕೆ ಆದರ್ಶ-ಸಂತೋಷ ಬಂಡೆ


