ಸಪ್ತಸಾಗರ ವಾರ್ತೆ,ವಿಜಯಪುರ, ಮೇ 18:
ಪ್ರತಿ ರೋಗಿಗೂ ಸಮರ್ಪಕ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಸಕಾಲಕ್ಕೆ ನೀಡಬೇಕು. ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಿದರು.
ಮನಗೂಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ, ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಅವರು ಈ ಸೂಚನೆ ನೀಡಿದರು.
ಔಷಧ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ಅವಶ್ಯಕ ಔಷಧಗಳು ಸದಾ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಹೊರಗೆ ಔಷಧ ಖರೀದಿಸಲು ತೊಂದರೆ ಆಗಬಾರದು ಎಂದರು.
ತಪಾಸಣಾ ಸೇವೆಗಳ ವೇಗ:
ರಕ್ತ ಪರೀಕ್ಷೆ ಸೇರಿದಂತೆ ಎಲ್ಲಾ ತಪಾಸಣೆಗಳನ್ನು ಶೀಘ್ರ ಮತ್ತು ನಿಖರವಾಗಿ ಪೂರ್ಣಗೊಳಿಸುವಂತೆ ಕ್ರಮ ವಹಿಸಬೇಕು ಎಂದೂ ಸೂಚಿಸಿದ ಅವರು, ಆರೋಗ್ಯ ಕೇಂದ್ರದ ಒಳ ಹಾಗೂ ಹೊರ ಭಾಗಗಳಲ್ಲಿ ಸ್ವಚ್ಛತೆ ಕಾಪಾಡಿ, ರೋಗಿಗಳಿಗೆ ಆರೋಗ್ಯಕರ ವಾತಾವರಣ ಒದಗಿಸಬೇಕು ಎಂದರು.
ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಆರೋಗ್ಯ ಕೇಂದ್ರದಲ್ಲಿ ಹಾಜರಿದ್ದು, ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದ ಅವರು, ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಗೌರವಪೂರ್ಣ ಮತ್ತು ಸ್ನೇಹಪೂರ್ಣ ಸೇವೆ ಒದಗಿಸಬೇಕು ಎಂದು ಸಿಇಒ ಸೂಚಿಸಿದರು.
ಒಳರೋಗಿ ಮತ್ತು ಹೊರರೋಗಿಗಳ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿ, ದಿನನಿತ್ಯದ ಮಾಹಿತಿಯನ್ನು ನವೀಕರಿಸಬೇಕು. ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಪರಿಶೀಲನೆ ವೇಳೆ ಆರೋಗ್ಯ ಕೇಂದ್ರದ ಸ್ವಚ್ಛತೆ ಹಾಗೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಇಒ ರಿಷಿ ಆನಂದ ಅವರು, ಇದೇ ಗುಣಮಟ್ಟದ ಸೇವೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ಸಿಇಒ ರಿಷಿ ಆನಂದ ಅವರು, ಕೇಂದ್ರದಲ್ಲಿನ ರಕ್ತ ತಪಾಸಣಾ ಘಟಕ, ರಕ್ತ ಪರೀಕ್ಷಾ ಸೌಲಭ್ಯ, ಸಿಬ್ಬಂದಿ ಹಾಜರಾತಿ, ದಾಖಲೆಗಳು, ಆರೋಗ್ಯ ಕೇಂದ್ರದ ಸ್ವಚ್ಛತೆ, ಒಳರೋಗಿ ಹಾಗೂ ಹೊರರೋಗಿಗಳ ವಾರ್ಡ್ಗಳನ್ನು ವೀಕ್ಷಿಸಿದರು. ಜೊತೆಗೆ, ಲೇಬರ್ ವಾರ್ಡ್, ಔಷಧ ವಿತರಣಾ ಕೇಂದ್ರ, ಸಿಸಿಟಿವಿ ವ್ಯವಸ್ಥೆ ಸೇರಿದಂತೆ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ದೀಪಕ್ ಅವರು, ಕೇಂದ್ರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳು, ಸಿಬ್ಬಂದಿ ವ್ಯವಸ್ಥೆ, ರೋಗಿಗಳ ನಿರ್ವಹಣೆ ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಬಳಿಕ ಜಿಪಂ ಸಿಇಒ ಅವರು, ಚಿಕಿತ್ಸೆಗೆ ಆಗಮಿಸಿದ್ದ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ಚಿಕಿತ್ಸೆಯ ಸಮಯಪಾಲನೆ, ಔಷಧ ಲಭ್ಯತೆ, ತಪಾಸಣೆಗಳ ವೇಗ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ದೀಪಕ ಹಾಗೂ ಇತರರು ಉಪಸ್ಥಿತರಿದ್ದರು.
ಸಕಾಲಕ್ಕೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ: ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಭೇಟಿ


