ಗಿಡ-ಮರಗಳ ಲಾಲನೆ ಪೋಷಣೆ ಅಗತ್ಯ: ನ್ಯಾಯಾಧೀಶ ಹರೀಶ ಎ.ಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.5: ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪರಿಸರ ಸಮತೋಲನ ಕಾಪಾಡಲು ಗಿಡ-ಮರಗಳ ಲಾಲನೆ ಪೋಷಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಕೂಡಗಿ ಎನ್ ಟಿಪಿಸಿ ವಿದ್ಯುತ್ ಸ್ಥಾವರದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಹಸಿರು ವಿಸ್ತರಣೆಗೆ ಎನ್‌ಟಿಪಿಸಿ ಕೈಗೊಂಡಿರುವ ಕಾರ್ಯವನ್ನು ನ್ಯಾಯಾಧೀಶರು ಪ್ರಶಂಸಿಸಿದ ಅವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಈ ಮಹತ್ವದ ಅಭಿಯಾನದಲ್ಲಿ ಭಾಗಿಯಾಗಿಸಿರುವುದಕ್ಕೆ ಎನ್‌ಟಿಪಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಕೂಡಗಿ ಎನ್‌ಟಿಪಿಸಿ ಯೋಜನೆಯ ಮುಖ್ಯಸ್ಥ ಮಧು ಎಸ್. ಅಧ್ಯಕ್ಷತೆ ವಹಿಸಿ, ಪರಿಸರ ಸಂರಕ್ಷಣೆಯ ಭಾಗವಾಗಿ ಸಂಸ್ಥೆ ಈ ವರ್ಷ ತನ್ನ ವಿದ್ಯುತ್ ಸ್ಥಾವರದ ಆವರಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 30 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಅದರ ಅಂಗವಾಗಿ ಈ ಬೃಹತ್ ಅಭಿಯಾನ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದ ಅಂತ್ಯದಲ್ಲಿ ಅತಿಥಿಗಳು ಮತ್ತು ಅಧಿಕಾರಿಗಳು ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ಈ ಅಭಿಯಾನದಿಂದ ಪ್ರದೇಶದಲ್ಲಿ ಹಸಿರು ವಾತಾವರಣ ವೃದ್ಧಿಯಾಗುವುದರ ಜೊತೆಗೆ ಪರಿಸರ ಜಾಗೃತಿಯೂ ಹೆಚ್ಚುವ ನಿರೀಕ್ಷೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್. ಹಾಗರಗಿ, ಕರ್ನಾಟಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಎನ್‌ಟಿಪಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Share this