ಸಪ್ತಸಾಗರ ವಾರ್ತೆ, ವಿಜಯಪುರ,ಆ. 10:
ಕಲಿಯುಗದ ಕಾಮಧೇನು-ಕಲ್ಪವೃಕ್ಷ ಎಂದೇ ಖ್ಯಾತನಾಮರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರವಾಗಿ ಭಾನುವಾರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಅತ್ಯಂತ ಭಕ್ತಿಪುರಸ್ಸರವಾಗಿ ಆರಂಭಗೊಂಡಿತು.
ಇದರ ಅಂಗವಾಗಿ ಸುಪ್ರಭಾತ,ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ಬೆಳಿಗ್ಗೆ ಅಷ್ಟೋತ್ತರ ಸಹಿತ ಫಲಪಂಚಾಮೃತಾಭಿಷೇಕ ನಡೆಯಿತು.
ಶ್ರೀ ಗುರುಸಾರ್ವಭೌಮರ ಮಹಿಮೆ ಕುರಿತು ಪಂಡಿತ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ) ಪ್ರವಚನ ನೀಡಿ, ಗುರುಸಾರ್ವಭೌ ಮರು ಕರುಣಾಮಯಿ ಭಕ್ತರು ಭಕ್ತಿಯಿಂದ ಕೇಳಿದ ಎಲ್ಲವನ್ನು ಕರುಣಿಸಬಲ್ಲವರು ಎಂದು ಬಣ್ಣಿಸಿದರು. ಗುರುರಾಯರ ಮೇಲೆ ವಿಶ್ವಾಸವಿಟ್ಟು ಭಕ್ತಿಯಿಂದ ಸ್ಮರಿಸಿದರೆ ಎಲ್ಲವೂ ದೊರಕಲು ಸಾಧ್ಯ ಎಂದರಲ್ಲದೇ, ನಮ್ಮಲ್ಲಿ ಸಮರ್ಪಣ ಭಾವ ಕ್ಷಮಾ ಸ್ವಭಾವ ಅತ್ಯವಶ್ಯ ಎಂದರು.
ಬಳಿಕ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು.
ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ನಡೆಯಿತು.
ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು ಗುರುಸಾರ್ವಭೌಮರ ವೃಂದಾವನದ ದರ್ಶನ ಪಡೆದು ಪುನೀತರಾದರು. ಸಂಸದ ರಮೇಶ ಜಿಗಜಿಣಗಿ ಆರಾಧನೆ ಅಂಗವಾಗಿ ಶ್ರೀಮಠಕ್ಕೆ ಭೇಟಿ ನೀಡಿ ಗುರುಸಾರ್ವಭೌಮರ ದರ್ಶನ ಪಡೆದರು.
ವೃಂದಾವನವನ್ನು ಶ್ರೀಮಠದ ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯರು ಹಾಗೂ ದಾಮೋದರಾಚಾರ್ಯ ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕರಿಸಿದ್ದರು.
ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ ಸೇರಿದಂತೆ, ಜಿ ಎಸ್ ಕುಲಕರ್ಣಿ, ಅಶೋಕ ತಾವರಗೇರಿ, ವಿ ಬಿ ಕುಲಕರ್ಣಿ, ವಿಜಯಿಂದ್ರ ಜೋಶಿ, ಗೋವಿಂದ ಸವದತ್ತಿ, ಡಾ. ಪವಮಾನ ಜೋಶಿ, ಶ್ರೀಕೃಷ್ಣ ಪಡಗಾನೂರ, ಬಂಡಾಚಾರ್ಯ ಜೋಶಿ, ಜೆ.ವಿ. ಕಿರಸೂರ, ಸಂತೋ಼ಷ ಕೌತಾಳ, ಶ್ರೀಧರ ಜೋಶಿ, ಗಿರೀಶ ಕುಲಕರ್ಣಿ, ಭೀಮಣ್ಣ ಕುಲಕರ್ಣಿ ಮೊದಲಾದವರು ಭಾಗವಹಿಸಿದ್ದರು.
ನಂಜನಗೂಡು ರಾಯರ ಮಠದಲ್ಲಿಭಕ್ತಿ ಭಾವದಿಂದ ಪೂರ್ವಾರಾಧನೆ ಆಚರಣೆ
