ಕ್ರೂಸರ್ ಅಟ್ಟಹಾಸಕ್ಕೆ ಬೈಕ್ ಸವಾರ ಬಲಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕ್ರೂಸರ್ ಜೀಪ್‌ವೊಂದು ಬೈಕ್ ಹಾಗೂ ಗೂಡ್ಸ್ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಬಾಗಲಕೋಟೆ ರಸ್ತೆಯ ದಾತ್ರಿ ಮಸೀದಿ ಬಳಿ ಶನಿವಾರ ರಾತ್ರಿ ನಡೆದಿದೆ.
ಜಂಬಗಿ ಕೆ.ಡಿ. ಗ್ರಾಮದ ನಿವಾಸಿ, ಸದ್ಯ ವಿಜಯಪುರದಲ್ಲಿ ವಾಸವಿರುವ ಬಸವರಾಜ ಸದಾಶಿವ ದಳವಾಯಿ ಎಂಬಾತ ಕೆಎ-29-4418 ಸಂಖ್ಯೆಯ ಕ್ರೂಸರ್ ಜೀಪ್ ಅನ್ನು ಕೇಂದ್ರ ಬಸ್ ನಿಲ್ದಾಣದಿಂದ ಬಾಗಲಕೋಟೆ ಕ್ರಾಸ್ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಈ ವೇಳೆ ಎದುರಿನಿಂದ ಬರುತ್ತಿದ್ದ ಕೆಎ-28 ಇಕೆ-2901 ಸಂಖ್ಯೆಯ ಬೈಕ್‌ಗೆ ಜೀಪ್ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿದ ಜೀಪ್, ಬೈಕ್‌ನ ಹಿಂದೆ ಬರುತ್ತಿದ್ದ ಕೆಎ-28 ಎಎ-9773 ಸಂಖ್ಯೆಯ ಗೂಡ್ಸ್ ಟಂಟಂಗೂ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ವಿರೇಂದ್ರ ನೆನ್ಮಲ್ ಓಸ್ವಾಲ್ (ಇನಾಮದಾರ ಕಾಲನಿ, ವಿಜಯಪುರ) ಗಂಭೀರವಾಗಿ ಗಾಯಗೊಂಡರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾತ್ರಿ 10.06ಕ್ಕೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗೂಡ್ಸ್ ಟಂಟಂನಲ್ಲಿದ್ದ ಫಿರ್ಯಾದಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಮಹ್ಮದ ಅನೀಸ್ ಅಬ್ದುಲ್‌ಪುರ ಬಾಗವಾನ ನೀಡಿದ ದೂರಿನ ಮೇರೆಗೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.98/2026ರಡಿ ಬಿಎನ್‌ಎಸ್ ಕಲಂ 281, 125(ಎ), 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this