ಹಾಲು ಹಣ್ಣು ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ

ಸಪ್ತ ಸಾಗರ ವಾರ್ತೆ,ವಿಜಯಪುರ, ಜು. 30:
ಮನುಷ್ಯನಿಗೆ ಪೂರಕವಾಗಿರುವ ಹಬ್ಬಗಳಲ್ಲಿನ ಕೆಲ ಆಚರಣೆಗಳು ಮೂಢನಂಬಿಕೆಗೆ ಪ್ರಚೋದಿಸುತ್ತವೆ. ಇದನ್ನು ತಡೆಗಟ್ಟಲು ನಾಗರ ಪಂಚಮಿಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಾನವ ಬಂದುತ್ವ ವೇದಿಕೆಯಿಂದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬಿಸ್ಕಟ್ ನೀಡುವುದರ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಯಿತು.
ಜಿಲ್ಲಾ ಘಟಕ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸನಗೌಡ ಹರನಾಳ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ಮಾತನಾಡಿದ ಅವರು, ಇಂದು ಬುಧವಾರ ಬಸವಣ್ಣನವರು ಲಿಂಗೈಕ್ಯವಾದ ದಿನವಾಗಿದೆ. ಅವರ “ಕಲ್ಲ ನಾಗರ ಕಂಡರೆ ಹಾಲನೆರೆಯಂಬರು; ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ” ನುಡಿಯಂತೆ ದೇವಸ್ಥಾನಗಳಲ್ಲಿ ಕಲ್ಲ ನಾಗರಹಾವಿಗೆ ಹಾಲೆರೆಯುತ್ತಾರೆ. ಆದರೆ, ನಿಜ ಹಾವನ್ನು ಕಂಡರೆ ಹೊಡೆಯುತ್ತಾರೆ ಏಕೆ? ಇದರ ಬದಲಾಗಿ ಹಸಿದವರಿಗೆ, ಅನಾರೋಗ್ಯ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲನ್ನು ನೀಡಿದರೆ ಬಡವರಿಗೆ ಅದು ಅಮೃತವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಮೂಢನಂಬಿಕೆಗೆ ತುತ್ತಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹನಮಂತ ಚಿಂಚಲಿ, ಪ್ರಧಾನಕಾರ್ಯದರ್ಶಿ ಬಸವರಾಜ ಕೊಂಡಗೂಳಿ, ಕಾರ್ಯದರ್ಶಿ ಪ್ರಭುಗೌಡ ಪಾಟೀಲ, ಕುಮಾರಗೌಡ ಹರನಾಳ, ಶ್ವೇತಾ ಕುಮಾರಗೌಡ ಹರನಾಳ, ಫಯಾಜ್ ಕಲಾದಗಿ, ಡಾ. ರವಿ ಬಿರಾದಾರ, ಅಶೋಕ ಸೌದಾಗರ, ರವಿ ಕಿತ್ತೂರ, ಚನ್ನು ಕಟ್ಟಿಮನಿ, ಚಂದ್ರಶೇಖರ ಗಂಟೆಪ್ಪಗೋಳ, ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಗೋಕಾಕ, ಉಪಾಧ್ಯಕ್ಷೆ ಶಶಿಕಲಾ ಕೊಟಗಿ, ಸವಿತಾ ಬಬಲೇಶ್ವರ ಜಿಲ್ಲಾ ಆಸ್ಪತ್ರೆ ಪ್ರಧಾನಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಉಪಸ್ಥಿತರಿದ್ದರು.

Share