ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 12:
ಶೇ. 88ರಷ್ಟು ಕಚ್ಚಾ ತೈಲನ್ನು ಭಾರತ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕ- ಇರಾನ್ ನಡುವಿನ ಯುದ್ಧ, ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಯುದ್ಧದ ಪರಿಣಾಮದಿಂದ ಅನೇಕ ದೇಶಗಳು ಅವಸಾನದ ಅಂಚಿಗೆ ಹೋಗಿವೆ. ಯುದ್ಧ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ಭಾರತಕ್ಕೆ ಯಾವುದೇ ತೊಂದರೆ ಆಗದ ಹಾಗೆ ಪ್ರಧಾನಿ ನರೇಂದ್ರ ಮೋದಿ ನೋಡಿಕೊಳ್ಳುತ್ತಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ 145 ಕೋಟಿ ಜನತೆಯನ್ನು ಹೊಂದಿದ ಭಾರತ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಭಾರತ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಹೊಂದಲು ಯಾವ ಪಕ್ಷ ಕಾರಣ? ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಭಾರತದ ಜನಸಂಖ್ಯೆ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ಹೋಗಲು ಕಾಂಗ್ರೆಸ್ ಕಾರಣವಲ್ಲವೆ? ಎಂದು ಅವರು ತಿಳಿಸಿದ್ದಾರೆ.
ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಮರೆತ ಕಾಂಗ್ರೆಸ್ಸ್ ಗೆ ದಿನ ಬೆಳಗಾದರೆ ನರೇಂದ್ರ ಮೋದಿ ಅವರನ್ನು ಟೀಕಿಸುವದನ್ನು ಬಿಟ್ಟರೆ, ಬೇರೆ ಕೆಲಸವೇ ಇಲ್ಲದಂತಾಗಿದೆ.
ಕೊರೋನಾ ಬಂದರೆ ಮೋದಿ ಕಾರಣ, ಅಮೆರಿಕ ಇಸ್ರೇಲ್ ಯುದ್ಧ ನಡೆದರೆ ಮೋದಿ ಕಾರಣ, ತಮ್ಮ ಮನೆಯ ಮುಂದೆ ನಾಯಿ ಸತ್ತರೂ ಮೋದಿ ಕಾರಣ ಎನ್ನುವ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಯುದ್ಧದ ಅಪಾಯವನ್ನು ಮನಗಂಡ ನರೇಂದ್ರ ಮೋದಿಯವರು ದೇಶದ ಜನತೆಗೆ ಯುದ್ಧ ಮುಗಿಯುವವರೆಗೆ ಬಂಗಾರವನ್ನು ಖರೀದಿಸಬೇಡಿ. ಸಾಧ್ಯವಾದಷ್ಟು ಪೆಟ್ರೋಲ್, ಡೀಸೆಲ್ ವಾಹನಗಳನ್ನು ಉಪಯೋಗಿಸಬೇಡಿ. ಮೋಜು ಮಸ್ತಿಗಾಗಿ ಮಾಡುವ ವಿದೇಶ ಪ್ರಯಾಣಗಳನ್ನು ನಿಲ್ಲಿಸಿ ಎಂದು ಕರೆ ನೀಡಿದರೆ ತಪ್ಪೇನು? ಎಂದಿದ್ದಾರೆ.
ಮೋದಿಯವರು ಹೇಳಿರುವುದು ನಿಮ್ಮಲ್ಲಿರುವ ಬಂಗಾರವನ್ನು ಕೊಡಲು ಅಲ್ಲ, ಹೊಸದಾಗಿ ಬಂಗಾರವನ್ನು ಖರೀದಿಸಬೇಡಿ ಎಂದು ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗರೇ ದೇಶಭಕ್ತರು ಎಂದು ಹೇಳಿಕೊಳ್ಳುವ ತಾವು ಇಂತಹ ಪರಿಸ್ಥಿತಿಯಲ್ಲಿ ಬಂಗಾರ ಖರೀದಿ ಮಾಡುವುದನ್ನು ಬಿಟ್ಟು, ನರೇಂದ್ರ ಮೋದಿ ಅವರ ಮಾತನ್ನು ಸ್ವಾಗತಿಸಬೇಕಲ್ಲವೇ?
ಈ ಹಿಂದೆ ಲಾಲ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ವೀರಪ್ಪ ಮೊಯ್ಲಿ ಯವರು ಇದೇ ರೀತಿ ಕರೆ ಕೊಟ್ಟಾಗ, ಸಮಸ್ತ ದೇಶದ ಜನತೆ ಅವರ ಜೊತೆಗೆ ನಿಂತಿದ್ದನ್ನು ಇಂದು ಕಾಂಗ್ರೆಸ್ ಮರೆತಿದೆ ಎಂದು ತಿಳಿಸಿದ್ದಾರೆ.
ಘೋರ ಯುದ್ಧದ ಸಂದರ್ಭದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ದೇಶಕ್ಕಾಗಿ ಕಾರ್ಯ ಮಾಡಿ, ಇಲ್ಲದೆ ಹೋದರೆ ತಮ್ಮ ಸ್ವಯಂಕೃತ ಅಪರಾಧದಿಂದಲೇ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿಯವರೆಗೆ ನರೇಂದ್ರ ಮೋದಿಯವರು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡಂತಹ ಒಂದಾದರೂ ನಿರ್ಣಯವನ್ನು ತಾವು ಸ್ವಾಗತಿಸಿದ್ದೀರಾ? ಎಃದು ಪ್ರಶ್ನಿಸಿದ್ದಾರೆ.
ಟ್ರಿಪಲ್ ತಲಾಕ್ ವಿರೋಧ, ಜಿ ಎಸ್ ಟಿ ಕಾಯ್ದೆಗೆ ವಿರೋಧ, ಅಕ್ರಮ ವಲಸಿಗರ ತಡೆಗೆ ವಿರೋಧ, ಸಿ ಎ ಎ, ಎನ್ ಆರ್ ಸಿ ಗೆ ವಿರೋಧ, ಕಾಶ್ಮೀರದಲ್ಲಿನ ಆರ್ಟಿಕಲ್ 370 ತೆಗೆಯಲು ವಿರೋಧ, ಮಹಿಳಾ ಮೀಸಲು ಹಾಗೂ ಡಿಲಿಮಿಟೇಶನ್ ಗೆ ವಿರೋಧ, ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ್ ಗೆ ವಿರೋಧ
ವಕ್ಫ್ ಕಾಯ್ದೆ, ಲವ್ ಜಿಹಾದ್, ಗೋ ರಕ್ಷಣೆಗೆ ವಿರೋಧ, ರಾಮ ಮಂದಿರಕ್ಕೆ ವಿರೋಧ, ವಂದೇ ಮಾತರಂ ಗೀತೆಗೆ ವಿರೋಧ ಇವೆಲ್ಲವುಗಳನ್ನು ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ರಾಷ್ಟ್ರ ವಿರೋಧಿ ನೀತಿಗಳಿಂದಲೇ ಇವತ್ತು ದೇಶದಲ್ಲಿ ಕಾಂಗ್ರೆಸ್ ಪತನವಾಗುತ್ತಿದೆ.
ಕಾಂಗ್ರೆಸ್ಸಿನ ಪರಿಸ್ಥಿತಿ
“ವಿನಾಶ ಕಾಲೇ ವಿಪರೀತ ಬುದ್ಧಿ”
ಎಂಬಂತಾಗಿದೆ. ಎಂದವರು ಟೀಕಿಸಿದ್ದಾರೆ.
ಕಾಂಗ್ರೆಸ್ ಏನೇ ಹೇಳಿದರೂ ದೇಶದ ಜನತೆ ತಲೆ ಕೆಡಿಸಿಕೊಳ್ಳುವುದಿಲ್ಲ, ನರೇಂದ್ರ ಮೋದಿ ಅವರ ಜೊತೆಗೆ ನಿಂತು ಸಮಸ್ತ ರಾಷ್ಟ್ರ ಭಕ್ತರು ದೇಶ ರಕ್ಷಣೆಗೆ ಸಂಕಲ್ಪ ಮಾಡಿದ್ದಾರೆ. ಸಂಪೂರ್ಣವಾಗಿ ಯುದ್ಧ ನಿಲ್ಲುವವರೆಗೆ ಬಂಗಾರ ಖರೀದಿ ನಿಲ್ಲಿಸುವುದರೊಂದಿಗೆ ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡಿ, ವಿದೇಶ ಪ್ರಯಾಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿಗರೇ ನಿಮಗೆ ಬಂಗಾರ ಮುಖ್ಯವೋ ದೇಶ ಮುಖ್ಯವೋ? ರಾಘವ್ ಅಣ್ಣಿಗೇರಿ ಪ್ರಶ್ನೆ


