ಸಪ್ತಸಾಗರ ವಾರ್ತೆ, ವಿಜಯಪುರ, ಜು. 18: ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಬಳಿ ಸುಮಾರು 400 ಎಕರೆ ಪ್ರದೇಶದಲ್ಲಿ ರೂ. 557 ಕೋ. ವೆಚ್ಚದಲ್ಲಿ 0.77 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶುಕ್ರವಾರ ತಿಕೋಟಾ ಪಟ್ಟಣದ ಕೊರಬುಗಲ್ಲಿಯಲ್ಲಿ ಮಲಕನದೇವರಹಟ್ಟಿ ಇಟರಾಯನಗುಡಿ ಕೂಡು ರಸ್ತೆಯಿಂದ ಸಿದ್ದಾಪುರ ಕೆ- ತಿಕೋಟಾ ಕೂಡು ರಸ್ತೆ ವರೆಗೆ ಅಂದಾಜು ರೂ. 495 ಲಕ್ಷ ವೆಚ್ಚದಲ್ಲಿ 5.20 ಕಿ. ಮೀ ವ್ಹಾಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಹಾಗೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ. ಸಿ-2 ರಿಂದ ಜಂಕ್ಷನ್ ವರೆಗೆ ವ್ಹಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ ಅಂದಾಜು ರೂ.495 ಲಕ್ಷ ವೆಚ್ಚದಲ್ಲಿ 5 ಕಿ.ಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಬಾಬಾನಗರ ಬಳಿ ಜಲಾಶಯ ನಿರ್ಮಾಣದಿಂದ ಭಾಗದ ರೈತರಿಗೆ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲ, ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಕಾಲುವೆಗಳ ಮೂಲಕ 156 ಹಳ್ಳಗಳಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಇದರಿಂದ ಈ ಭಾಗಗಳಲ್ಲಿ ಅಂತರ್ಜಲ ವೃದ್ಧಿಸಲಿದೆ. ದೇಶಕ್ಕೆ ಮಾದರಿಯಾಗುವ ಕೆಲಸಗಳನ್ನು ಬಬಲೇಶ್ವರ ಮತಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಈಗ ನಿರ್ಮಿಸಲಾಗುತ್ತಿರುವ ಎರಡೂ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಈಗಾಗಲೇ ಮತಕ್ಷೇತ್ರದ ಎರಡೂ ತಾಲೂಕುಗಳಲ್ಲಿ ಎರಡು ಮಿನಿ ವಿಧಾನಸೌಧ, ಎರಡು ಸಬ್ ರಜಿಸ್ಟ್ರಾರ್ ಕಚೇರಿ, ಎರಡು ಇಂದಿರಾ ಕ್ಯಾಂಟೀನ್ ಸೇರಿದಂತೆ ಸಾಕಷ್ಟು ಕಚೇರಿಗಳು ಕಾರ್ಯಾರಂಭ ಮಾಡಿವೆ. ಅಭಿವೃದ್ಧಿಯಲ್ಲಿ ಬಬಲೇಶ್ವರ ಮತಕ್ಷೇತ್ರ ಎಲ್ಲರಿಗೂ ಮಾದರಿಯಾಗುತ್ತಿದೆ ಎಂದು ಸಚಿವರು ಹೇಳಿದರು.
ಮುಖಂಡರಾದ ಸೋಮನಾಥ ಬಾಗಲಕೋಟ, ಆರ್. ಬಿ. ದೇಸಾಯಿ, ಯಾಕೂಬ್ ಜತ್ತಿ, ಬಸಯ್ಯ ವಿಭೂತಿಮಠ, ಪ್ರಭಾವತಿ ನಾಟೀಕಾರ ಮಾತನಾಡಿ ಸಚಿವ ಎಂ. ಬಿ. ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಮತಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಸಚಿವರಿಗೆ ನಾವೆಲ್ಲರೂ ಸದಾ ಬೆಂಬಲವಾಗಿ ನಿಲ್ಲೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧು ಗೌಡನವರ, ಮುಖಂಡರಾದ ಜಗದೀಶಗೌಡ ಪಾಟೀಲ, ಶೋಭಾ ಹಲ್ಯಾಳ, ವಿಜುಗೌಡ ಪಾಟೀಲ, ಡಾ. ಗಜಾನನ ಮಹಿಶ್ಯಾಳೆ, ಯಮನಪ್ಪ ಮಲಕನವರ, ಈರಣ್ಣಗೌಡ ಬಿರಾದಾರ, ವಿ. ಎಂ. ಪಾಟೀಲ, ಕೆ.ಎನ್.ಎನ್.ಎಲ್ ಎಇಇ ಅಂಬಣ್ಣ ಹರಳಯ್ಯ, ಎಇ ಮಹಾದೇವ ನಡಗಡ್ಡಿ, ತಹಸೀಲ್ದಾರ ಸುರೇಶ ಚವಲರ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವಣ್ಣೆಪ್ಪ ಬಿರಾದಾರ, ಪ. ಪಂ. ಮುಖ್ಯಾಧಿಕಾರಿ ರಾಘು ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.
ಬಾಬಾನಗರ ಬಳಿ ಜಲಾಶಯ ನಿರ್ಮಾಣ: ಸಚಿವ ಎಂ.ಬಿ. ಪಾಟೀಲ್
