ಸಪ್ತಸಾಗರ ವಾರ್ತೆ,ವಿಜಯಪುರ, ಆ. 16:
ಸಹಕಾರಿ ಬ್ಯಾಂಕುಗಳು ರೈತರ ಪಾಲಿಗೆ ವರದಾನವಾಗಿವೆ ಎಂದು ಮಾಜಿ ಸಚಿವ, ಬಸವನ ಬಾಗೇವಾಡಿ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಸಾಲ ಸಿಗುವುದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಮಾತ್ರ. ಸಣ್ಣ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡಲ್ಲ. ಕಷ್ಟದಲ್ಲಿದ್ದಾಗಲೂ ಸಹಕಾರಿ ಸಂಘಗಳ ಸಾಲ ಮನ್ನಾ ಆಗಿ ಅದೆಷ್ಟೋ ರೈತರಿಗೆ ಅನುಕೂಲವಾಗಿದೆ.
ರಾಜ್ಯದಲ್ಲಿ 65 ಲಕ್ಷ ರೈತರಲ್ಲಿ 35 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆಯುತ್ತಿದ್ದಾರೆ ಎಂದು ಹೇಳಿದರು.
ರೈತರೇ ಸಾಲ ಕೊಡುವ ಮಟ್ಟಕ್ಕೆ ಬೆಳೆಯಬೇಕು. ದೇಶದಲ್ಲಿ ರೈತರ ಬೆಳೆಗಳಿಗೆ ಸ್ಥಿರ ಬೆಲೆ ನಿಗದಿಯಾದರೆ ಅವರ ಪ್ರಗತಿ ಸಾಧ್ಯ. ಈ ಭಾಗದಲ್ಲಿ ನೀರಾವರಿಯಿಂದ ಸದ್ಯ ತೋಟಗಾರಿಕೆ, ಹೈನುಗಾರಿಕೆ ಹೆಚ್ಚಿ ರೈತರು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವಂತಾಗಿದೆ. ಜಿಲ್ಲೆಯಲ್ಲಿ 270 ಸಂಘಗಳಲ್ಲಿ 250 ಸಂಘಗಳು ಕಚೇರಿ ಹೊಂದಿದ್ದು ರಾಜ್ಯದಲ್ಲಿಯೇ ದಾಖಲೆಯಾಗಿದೆ ಎಂದು ಹೇಳಿದರು.
ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದ ಕೈಗಾರಿಕೆ, ಮೂಲ ಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ, ನೀರಾವರಿ ಯೋಜನೆಗಳಿಂದಾಗಿ ಜಮೀನುಗಳಿಗೆ ನೀರು ದೊರೆತು ಇಲ್ಲಿನ ರೈತರು ಸಮೃದ್ಧವಾಗಿದ್ದಾರೆ. ಇಪ್ಪತ್ತೇಳು ಪ್ಯಾಕೇಜ್ಗಳ ಮೂಲಕ ಸಂಪೂರ್ಣ ನೀರಾವರಿಯ ಕನಸು ಈಡೇರಲಿದೆ. ಅಂತರ್ಜಲ ಮಟ್ಟ ಹೆಚ್ವಿ ದುರ್ಗಮ ಪ್ರದೇಶವಾಗಿದ್ದ ಟಕ್ಕಳಕಿಯಂಥ ಗ್ರಾಮದಲ್ಲೂ ಹೈನುಗಾರಿಕೆ ಕೈಗೂಡಿದೆ. ಅಕ್ಷಯ ಕಲ್ಪ ಮೂಲಕ ಪ್ರತಿ ಬಿ.ಎಲ್.ಡಿ.ಇ ಸಂಸ್ಥೆಯಿಂದ ಸಹಾಯಧನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕಿನ ನೆರವನ್ನೂ ಪಡೆಯುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ನಮ್ಮಲ್ಲಿ ಒಮ್ಮತವಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಉದ್ಯಮಿಗಳ ರೂ. 20 ಲಕ್ಷ ಕೋ. ಸಾಲ ಮನ್ನಾ ಮಾಡಿದೆ. ಆದರೆ, ರೈತರ ರೂ. 20 ಸಾವಿರ ಕೋಟಿ ಸಾಲ ಮನ್ನಾ ಮಾಡಲ್ಲ. ಸಹಕಾರಿ ಸಂಘಗಳ ಸಹಾಯವನ್ನು ರೈತರು ಪಡೆಯಬೇಕು. ಸಿಎಸ್ಆರ್ ಯೋಜನೆಯಡಿ ಟೊಯೋಟಾ ಕಂಪನಿ ಮೂಲಕ ಕಾತ್ರಾಳದಲ್ಲಿ ಶಾಲಾ ಕೋಣೆಗಳ ನಿರ್ಮಾಣವಾಗಲಿವೆ ಎಂದು ಅವರು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಮಮದಾಪುರದ ಶ್ರೀ ಮುರಘೇಂದ್ರ ಸ್ವಾಮೀಜಿ ಮಾತನಾಡಿ, ಬಬಲೇಶ್ವರದ ಪ್ರತಿ ಊರಲ್ಲಿ ಸಹಕಾರಿ ಬ್ಯಾಂಕ್ಗಳ ಕಟ್ಟಡಗಳಾಗಿವೆ. ಗ್ರಾಮೀಣರ ಪ್ರಗತಿಗೆ ಇವುಗಳ ಅಗತ್ಯವಿದೆ. ಸಚಿವರು ನೀರು ನೀಡಿದ್ದರಿಂದ ಇಲ್ಲಿನ ರೈತರು ಶ್ರೀಮಂತರಾಗಿದ್ದು, ಅವರೆಲ್ಲ ಬ್ಯಾಂಕುಗಳನ್ನು ಬಳಸಿಕೊಂಡು ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಗುಣದಾಳದ ವಿವೇಕಾನಂದ ದೇವರು ಮಾತಮಾಡಿದರು.
ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷೆ ಮಹಾದೇವಿ ಮನಗೂಳಿ ಅಧಕ್ಷತೆ ವಹಿಸಿದ್ದರು. ಮುಖಂಡರಾದ ಗುರುಲಿಂಗಪ್ಪ ಅಂಗಡಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ. ಜಿ. ಬಿರಾದಾರ, ಬ್ಯಾಂಕಿಗೆ ಭೂಮಿ ನೀಡಿದ ಶಾಂತಾಬಾಯಿ ಗೌಡತಿಯವರ ಪುತ್ರರಾದ ಹಿರೇಪಡಸಲಗಿಯ ಪಿ.ಕೆ.ಪಿಎಸ್ ಮಾಜಿ ಅಧ್ಯಕ್ಷ ಮಾದನಗೌಡ ಪಾಟೀಲ ಮತ್ತು ಮಾನಿಂಗಪ್ಪಗೌಡ ಪಾಟೀಲ, ಉಪಾಧ್ಯಕ್ಷೆ ಮಾಯವ್ವ ಗೋಡ್ಸೆ, ಸಹಕಾರ ಇಲಾಖೆ ಉಪ ನಿಬಂಧಕಿ ಎಸ್. ಕೆ. ಭಾಗ್ಯಶ್ರೀ, ನಬಾರ್ಡ್ ನ ಜಿಲ್ಲಾ ಪ್ರಬಂಧಕ ವಿಕಾಸ ರಾಠೋಡ, ಡಿಸಿಸಿ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ, ತರಬೇತಿ ಸಂಯೋಜಕ ಆರ್. ಎಂ. ಬಣಗಾರ, ಎಂ. ಡಿ. ಪಡಸಲಗಿ, ಮುಖಂಡರ ಗುರಲಿಂಗಪ್ಪ ಅಂಗಡಿ, ಮುಖಂಡ ಗುರಲಿಂಗಪ್ಪ ಅಂಗಡಿ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.
ಸಹಕಾರಿ ಬ್ಯಾಂಕುಗಳು ರೈತರ ಪಾಲಿಗೆ ವರದಾನ:ಶಿವಾನಂದ ಪಾಟೀಲ


