ಜನಗಣತಿ‌ ಯಶಸ್ವಿಗೊಳಿಸಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 5: ಜನಗಣತಿ-2027ರಡಿ ಮನೆಗಳ ಪಟ್ಟಿ ಮತ್ತು ಮನೆ ಗಣತಿಯನ್ನು ಏ. 16 ರಿಂದ ಮೇ 15ರವರೆಗೆ 30 ದಿನಗಳ ಕಾಲ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆನಂದ‌ ಕೆ. ಅವರು ತಿಳಿಸಿದ್ದಾರೆ.‌
ಈಗಾಗಲೇ ಏ. 1ರಿಂದ ಸ್ವಯಂ ಗಣತಿಗೆ ಅಧಿಕೃತ‌ ಚಾಲನೆ ಸಿಕ್ಕಿದ್ದು, ಏ. 15 ರವರೆಗೆ ಅವಕಾಶ ಕಲ್ಪಿಸಲಾಗಿದೆ ತಿಳಿಸಿದರು.
ಜನಗಣತಿಯು ಅತ್ಯಂತ ತಳಮಟ್ಟದ ಆಡಳಿತ ಘಟಕಗಳಿಗೆ, ಅಂದರೆ, ಗ್ರಾಮೀಣ ಪ್ರದೇಶದ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿನ ಪಟ್ಟಣ, ವಾರ್ಡ್ ಗಳಿಗೆ ವಸತಿ ಸ್ಥಿತಿ, ಸೌಲಭ್ಯಗಳು ಮತ್ತು ಆಸ್ತಿಗಳು,ಜನಸಂಖ್ಯಾಶಾಸ್ತ್ರ ಸಾಕ್ಷರತೆ, ಆರ್ಥಿಕ ಚಟುವಟಿಕೆ, ವಲಸೆ, ಫಲವಂತಿಕೆ ಇತ್ಯಾದಿಗಳು ದತ್ತಾಂಶದ ಪ್ರಾಥಮಿಕ ಮೂಲವಾಗಿದೆ.
ಜನಗಣತಿ ದತ್ತಾಂಶಗಳು ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಮತ್ತು ನೀತಿಗಳ ರಚನೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಆಡಳಿತಕ್ಕಾಗಿ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತದೆ.
ಇದರ ಜೊತೆಗೆ ಲೋಕಸಭೆ,
ವಿಧಾನಸಭೆ, ಪಂಚಾಯತಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲು ಜನಗಣತಿ ದತ್ತಾಂಶ ಬಳಸಲಾಗುತ್ತದೆ.
ಭಾರತದ ಜನಗಣತಿಯನ್ನು ಜನಗಣತಿ ಕಾಯ್ದೆ 1948 (1948 ರ 37) ಮತ್ತು ಜನಗಣತಿ ನಿಯಮಗಳು, 1990 ರ ನಿಬಂಧನೆಗಳು ಮತ್ತು ಅವುಗಳ ತಿದ್ದುಪಡಿಗಳಲ್ಲಿನ ಅವಕಾಶಗಳನ್ವಯ ನಡೆಸಲಾಗುತ್ತದೆ. ಜನಗಣತಿಯ ಸುಗಮ ಕಾರ್ಯಾಚರಣೆಗಾಗಿ ಜನಗಣತಿ ಕಾಯ್ದೆ 1948 ರ ಅಡಿಯಲ್ಲಿ ನಡೆಸಲು ಸಾರ್ವಜನಿಕರಿಗೆ ಹಲವಾರು ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಈ ಮಹತ್ವದ ಕೆಲಸವನ್ನು ನಿರ್ವಹಿಸುವಲ್ಲಿ ಸರ್ಕಾರಿ ಸಂಸ್ಥೆಗಳ ಪ್ರಯತ್ನಗಳಿಗೆ ಪೂರಕವಾಗಿ ಅಗತ್ಯವೆನಿಸಿದಾಗ ಸಾರ್ವಜನಿಕರಿಂದ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರುವ ಮತ್ತು ಇಚ್ಛೆಯ ಸಹಕಾರವನ್ನು ಸರ್ಕಾರವು ಬಯಸುತ್ತದೆ.
ಜನಗಣತಿಯ ಸಂದರ್ಭದಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನಿಖರ ಮತ್ತು ನಿಸ್ಸಂದಿಗ್ಧವಾದ ಮಾಹಿತಿಯನ್ನು ಎಲ್ಲರೂ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಗಣತಿದಾರರು ಕೇಳುವ ಯಾವುದೇ ಪ್ರಶ್ನೆಗೆ ಕಾನೂನು ಬದ್ಧವಾಗಿ ಉತ್ತರಿಸಬೇಕಾಗಿರುವ ಹೊಣೆಗಾರಿಕೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಸುಳ್ಳು ಉತ್ತರ ನೀಡಿದಲ್ಲಿ ಅಥವಾ ಅವರ ಜ್ಞಾನ ಅಥವಾ ನಂಬಿಕೆಗೆ ತಕ್ಕಂತೆ ಉತ್ತರಿಸಲು ನಿರಾಕರಿಸಿದಲ್ಲಿ ಅವರು ಜನಗಣತಿ ಕಾಯ್ದೆ 1948 ರ ಸೆಕ್ಷನ್ 11 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ.
ಹಾಗಾಗಿ‌ ಜಿಲ್ಲೆಯ ಜನತೆಗೆ ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಸಹಕರಿಸುವ ಮೂಲಕ ಭಾರತ ಜನಗಣತಿ-2027 ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

Share this