ಡಾ.ಅಂಬೇಡ್ಕರ್ ಅವರು ನಮ್ಮ ದೇಶದ ಆಸ್ತಿ-ಶಾಸಕ ಕಟಕದೊಂಡ

ಸಪ್ತಸಾಗರ ವಾರ್ತೆ, ವಿಜಯಪುರ, 14: ಜಗತ್ತಿನಲ್ಲಿ ಮೇರು ವ್ಯಕ್ತಿತ್ವ ಹೊಂದಿದ ಡಾ.ಅಂಬೇಡ್ಕರ್ ಅವರು ಜನಹಿತಕ್ಕಾಗಿ ಶಾಂತಿದೂತನಾಗಿ
ಬದುಕು ಸಾಗಿಸುತ್ತಾ, ಸರ್ವರಲ್ಲಿ ಸಮಾನತಾ ಭಾವ ಬಿತ್ತಿದ್ದಾರೆ. ಸಂವಿಧಾನ ಪೀಠಿಕೆಯ ಮೂಲಾಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಹೇಳಿದರು.
ರವಿವಾರದಂದು ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ 134 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಎತ್ತಿಹಿಡಿದ ವಿಶ್ವ ಕುಟುಂಬದ ತತ್ವವನ್ನು ಅನುಪಾಲಿಸಿಕೊಂಡು, ಇಂದಿನ ಯುವಪೀಳಿಗೆ ಓದಿನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ನಮ್ಮ ದೇಶದ ಆಸ್ತಿ ಎಂದು ಹೇಳಿದರು.
ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ, ಡಾ ಬಿ ಆರ್ ಅಂಬೇಡ್ಕರ್ ಅವರು ಇಡೀ ಮಾನವಕುಲದ ವಿಕಾಸದತ್ತ ಚಿತ್ತಹರಿಸಿ, ಸಂವಿಧಾನ ರಚಿಸಿ ದೇಶದ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇಂದಿನ ಮಕ್ಕಳು ಪುಸ್ತಕ ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.
ನೇತೃತ್ವ ವಹಿಸಿದ್ದ ನಾಗಠಾಣ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ ಮಾತನಾಡಿ, ಡಾ ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಆಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಡಾ.ಅಂಬೇಡ್ಕರ್ ಅವರ ಓದಿನ ಜೀವನವನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.
ಸಮಾಜ ಸೇವಕ ಹರ್ಷವರ್ಧನ ಪೂಜೇರಿ, ಸದಾಶಿವ ಹುಣಶ್ಯಾಳ, ಸಂತೋಷ ಬಂಡೆ, ಸಂತೋಷ ಹಳ್ಳಿಕೇರಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾಬಾಯಿ ಗಿರಿಸಾಗರ ಮತ್ತು ಉಪಾಧ್ಯಕ್ಷ ಬಾಬು ಕತ್ನಳ್ಳಿ ಜ್ಯೋತಿ ಬೆಳಗಿಸಿದರು.
ಗ್ರಾಮ ಪಂಚಾಯಿತಿ ಪಿಡಿಓ ಬಿ ಆರ್ ರಾಠೋಡ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಅಥರ್ಗಾ ತಾ ಪಂ ಮಾಜಿ ಸದಸ್ಯ ಗಣಪತಿ ಬಾಣಿಕೋಲ, ವಿಜಯಪುರದ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಶಹಾಪುರ,ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ಡಿ ಎಂ ಚಲವಾದಿ, ಗ್ರಾ ಪಂ ಸದಸ್ಯರಾದ ಮಹಾದೇವಿ ಪಾಟೀಲ, ವಿಠಪ್ಪ ಕತ್ನಳ್ಳಿ, ಬಸಪ್ಪ ಹಳ್ಳಿ, ಮಾಸಿಮಸಾಬ್ ಬಾಗವಾನ, ನಂದಾ ಕತ್ನಳ್ಳಿ ಮತ್ತು ವಿಶ್ವನಾಥ ಕಲಗೊಂಡ, ಚಂದ್ರು ದ್ಯಾಬೇರಿ, ಶ್ರೀಕಾಂತ ಗುಜ್ಜಲವರ, ವಿಶ್ವನಾಥ ಕಲಗೊಂಡ, ರಮೇಶ ಬಿರಾದಾರ, ಶರಣವ್ವ ವಾಲೀಕಾರ, ಸಂತೋಷ ಪಿರಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಮಕ್ಕಳಿಗೆ ಸನ್ಮಾನಿಸಲಾಯಿತು.

Share