ಬಾಗಲಕೋಟೆಯಲ್ಲಿ ಜೂ. 15 ರಂದು ಸುಧಾರಿತ ನರರೋಗ, ಅಪಸ್ಮಾರ ಉಚಿತ ಚಿಕಿತ್ಸಾ ಶಿಬಿರ

ಸಪ್ತಸಾಗರ ವಾರ್ತೆ,ಬಾಗಲಕೋಟೆ, ಜೂ. 13:
ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನರರೋಗ ಮತ್ತು ಅಪಸ್ಮಾರ (ಫಿಟ್ಸ್) ರೋಗಿಗಳಿಗೆ ಇಲ್ಲೊಂದು ಅತ್ಯುತ್ತಮ ಅವಕಾಶ ಲಭ್ಯವಾಗಿದೆ. ಜಾಗತಿಕ ಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿರುವ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಹಾಗೂ ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಜೂ. 15ರಂದು ಸುಧಾರಿತ ನರರೋಗ ಮತ್ತು ಅಪಸ್ಮಾರ ಚಿಕಿತ್ಸಾ ವಿಶೇಷ ಸಮಾಲೋಚನಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜೂನ್ 15 ರಂದು ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಈ ಶಿಬಿರ ನಡೆಯಲಿದ್ದು, ಪದೇ ಪದೇ ಬರುವ ತೀವ್ರ ತಲೆನೋವು ಮತ್ತು ತಲೆಸುತ್ತು (ವರ್ಟಿಗೋ), ಅಪಸ್ಮಾರ (ಫಿಟ್ಸ್) ಮತ್ತು ಪಾರ್ಕಿನ್ಸನ್ ಕಾಯಿಲೆ, ಕೈಕಾಲು ನಡುಗುವುದು, ದೇಹದ ಭಾಗಗಳು ಮರಗಟ್ಟುವುದು ಹಾಗೂ ಸ್ನಾಯು ದೌರ್ಬಲ್ಯ, ಜ್ಞಾಪಕಶಕ್ತಿ ಕೊರತೆ ಮತ್ತು ನಡೆಯಲು ತೊಂದರೆಯಾಗುವುದು, ನಿರಂತರ ಕಾಡುವ ಕುತ್ತಿಗೆ ನೋವು, ಬೆನ್ನುನೋವು ಹಾಗೂ ತೋಳು- ಕಾಲುಗಳ ನೋವು, ಪಾರ್ಶ್ವವಾಯು ಸಂಬಂಧಿತ ದೀರ್ಘಕಾಲದ ಸಮಸ್ಯೆಗಳು ಹೀಗೆ ನಿರಂತರವಾಗಿ ಕಾಡುವ ಲಕ್ಷಣಗಳು ಅಥವಾ ಕಾಯಿಲೆ ಇರುವ ಸಾರ್ವಜನಿಕರು ಈ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಖ್ಯಾತ ನರರೋಗ ಮತ್ತು ಅಪಸ್ಮಾರ ಚಿಕಿತ್ಸಾ ತಜ್ಞ ಡಾ. ಸೋನಿಯಾ ತಾಂಬೆ ಅವರು ರೋಗಿಗಳಿಗೆ ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ.
ಶಿಬಿರದ ಕುರಿತು ಮಾತನಾಡಿದ ಡಾ. ಸೋನಿಯಾ ತಾಂಬೆ, “ಅನೇಕ ನರರೋಗ ಸಮಸ್ಯೆಗಳು ತಡವಾಗಿ ಬೆಳಕಿಗೆ ಬರುತ್ತವೆ. ಏಕೆಂದರೆ ಪದೇ ಪದೇ ಬರುವ ತಲೆನೋವು, ತಲೆಸುತ್ತು, ಮರಗಟ್ಟುವಿಕೆ, ಜ್ಞಾಪಕಶಕ್ತಿಯ ಕೊರತೆ ಅಥವಾ ದೇಹದ ನಡುಕದಂತಹ ಲಕ್ಷಣಗಳನ್ನು ಜನರು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಅದೇ ರೀತಿ, ಫಿಟ್ಸ್ ಮತ್ತು ಅಪಸ್ಮಾರದಿಂದ ಬಳಲುತ್ತಿರುವ ರೋಗಿಗಳು ನಿಖರವಾದ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ಸಿಗುವ ಮುನ್ನ ವರ್ಷಗಟ್ಟಲೆ ನರಳುತ್ತಾರೆ. ವಿಶೇಷವಾಗಿ ಫಿಟ್ಸ್ ಬಂದಾಗ ಕ್ಷಣಕಾಲ ಶೂನ್ಯವಾಗಿ ದಿಟ್ಟಿಸುವುದು, ತಾತ್ಕಾಲಿಕ ಗೊಂದಲಕ್ಕೊಳಗಾಗುವುದು, ನೆನಪು ತಪ್ಪುವುದು ಅಥವಾ ಸುಲಭವಾಗಿ ಗುರುತಿಸಲು ಸಾಧ್ಯವಾಗದ ಇತರ ಲಕ್ಷಣಗಳು ಕಂಡುಬಂದಾಗ ಇದನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಬಾಗಲಕೋಟೆಯ ಈ ಶಿಬಿರದ ಮೂಲಕ ಸ್ಥಳೀಯ ರೋಗಿಗಳಿಗೆ ಅವರ ಮನೆಯ ಹತ್ತಿರವೇ ಪರಿಣಿತ ನರರೋಗ ಚಿಕಿತ್ಸೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ವಿವರಿಸಿದರು.
ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಎ.ವಿ. ಮಾತನಾಡಿ, “ನಮ್ಮ ಭಾಗದ ಜನತೆಗೆ ನರರೋಗ ಕ್ಷೇತ್ರದ ಉನ್ನತ ತಜ್ಞರ ವೈದ್ಯಕೀಯ ಸೇವೆ ಒದಗಿಸಲು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯೊಂದಿಗೆ ಕೈಜೋಡಿಸಿದೆ. ಈ ನಿರ್ಧಾರದಿಂದಾಗಿ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೋಗಿಗಳು ಇನ್ನು ಮುಂದೆ ಸುಧಾರಿತ ನರರೋಗ ಚಿಕಿತ್ಸೆಗಾಗಿ ಬೆಂಗಳೂರಿನಂತಹ ನಗರಗಳಿಗೆ ಪ್ರಯಾಣ ಬೆಳೆಸುವುದು ತಪ್ಪಲಿದೆ.” ಎಂದರು.
ಹೆಚ್ಚಿನ ಮಾಹಿತಿ ಅಥವಾ ಮುಂಗಡ ಕಾಯ್ದಿರಿಸುವಿಕೆ ಪಡೆಯಲು ಸಾರ್ವಜನಿಕರು ಜೂನ್ 15, 2026 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ಒಳಗೆ ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆಗೆ ಭೇಟಿ ನೀಡಬಹುದಾಗಿದೆ. ಆಸ್ಪತ್ರೆಯ ಮೊಬೈಲ್ ಸಂಖ್ಯೆ: 99864 59671 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share this