ಪೌರಕಾರ್ಮಿಕರಿಗೆಉಚಿತಮಧುಮೇಹಚಿಕಿತ್ಸೆ: ಡಾ. ಬಾಬುರಾಜೇಂದ್ರನಾಯಕಘೋಷಣೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 3 : ಜಿಲ್ಲೆಯ ಮನಗೂಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಯಶಸ್ವಿಯಾಗಿ ನೆರವೇರಿತು.
ಈ ಶಿಬಿರವನ್ನು ಶ್ರೀ ತುಳಸಿಗಿರೀಶ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ, ಖ್ಯಾತ ಮಧುಮೇಹ ತಜ್ಞ ಡಾ. ಬಾಬುರಾಜೇಂದ್ರ ನಾಯಿಕ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ತಾಲೂಕಾಧ್ಯಕ್ಷ ಮಹೇಶ ಪಿರಗಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಧುರೀಣ ಸೋಮನಗೌಡ ಪಾಟೀಲ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವನಾಥಗೌಡ ಪಾಟೀಲ ನೆರವೇರಿಸಿದವರು. ಡಾ. ಬಾಬುರಾಜೇಂದ್ರ ನಾಯಕ ಸೇರಿದಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಖಿಲೇಶ ಪಾಟೀಲ, ಭೀಮಗೊಂಡ ಹತ್ತರಿಕಿ, ಭೀಮು ಸವದಿ, ಪ್ರದೀಪ ಜಾನಕರ, ಎಂ.ಕೆ. ಎಳಗುಂಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಡಾ. ಬಾಬುರಾಜೇಂದ್ರ ನಾಯಕ ಅವರು ತಮ್ಮ ಭಾಷಣದಲ್ಲಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಮಧುಮೇಹ ಮತ್ತು ಹೃದಯ ಆರೋಗ್ಯದ ಮಹತ್ವವನ್ನು ವಿವರಿಸಿದರು. “ಸಣ್ಣ ಆಲಸ್ಯವು ದೊಡ್ಡ ರೋಗಕ್ಕೆ ಕಾರಣವಾಗಬಹುದು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕಡ್ಡಾಯ. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸಂಭವನೀಯ ಜೀವಘಾತಕ ಸಮಸ್ಯೆಗಳಿಂದ ಉಳಿಯಬಹುದು” ಎಂದು ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ತಮ್ಮ ತುಳಸಿಗಿರೀಶ್ ಫೌಂಡೆಶನ್ ಹಾಗೂ ಆಸ್ಪತ್ರೆಯ ವತಿಯಿಂದ, ಪಟ್ಟಣ ಪಂಚಾಯತ್ ಪೌರಕಾರ್ಮಿಕರಿಗೆ ಮಧುಮೇಹಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದರು. ಈ ಘೋಷಣೆಗೆ ಪೌರಕಾರ್ಮಿಕರು ಕೃತಜ್ಞತೆ ವ್ಯಕ್ತಪಡಿಸಿದರು.
ಶಿಬಿರದ ಯಶಸ್ವಿ ಆಯೋಜನೆಯಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮಹೇಶ ಪಿರಗಾ, ಶ್ರೀ ತುಳಸಿಗಿರೀಶ್ ಫೌಂಡೆಶನ್ ಸದಸ್ಯ ರಾಕೇಶ ರಜಪೂತ, ಅನೀಲ ಚವ್ಹಾಣ, ಅರವಿಂದ ನಾಯಕ, ಕಿಶನ ರಾಠೋಡ, ಅನೀಲ ಕರಾಬಿ ಅವರೊಂದಿಗೆ ಪಟ್ಟಣ ಪಂಚಾಯತ್ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಭೀಮ ನಗರ ಶಾಲೆಯ ಮುಖ್ಯೋಪಾಧ್ಯಾಯ ಕುಲಕರ್ಣಿ ಅವರು ನಡೆಸಿಕೊಟ್ಟರು.
ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವೈದ್ಯಕೀಯ ತಂಡದಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ತಪಾಸಣೆಗಳು ಉಚಿತವಾಗಿ ನಡೆದವು.

Share