ಮಹಾಬಳೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಗಂಗಾ ಪೂಜೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:
ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿಯ ಉಗಮಸ್ಥಾನವಾದ ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ 19 ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮುಂಗಾರು ಆರಂಭವಾಗುವದರೊಂದಿಗೆ ಬರುವ ಕಡ್ಲಿಗರ ಪೂರ್ಣಿಮೆ ದಿನದಂದು ಈ ಭಾಗದ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಹಲವರು ವಿಶೇಷ ಪೂಜೆ ಸಲ್ಲಿಸಿ ಕೃಷ್ಣೆಯ ಕೃಪೆ ರೈತರ ಮೇಲಿರಲಿ. ಕಾಲಕಾಲಕ್ಕೆ ಸರಿಯಾಗಿ ಹರಿದು ಬದುಕು ಬಂಗಾರ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.
ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದ ಪಂಚಗಂಗಾ ಸ್ಥಳದಲ್ಲಿ ಹುಟ್ಟುವ ಕೃಷ್ಣಾ ನದಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೆ ಜೀವ ಜಲಧಾರೆಯಾಗಿದ್ದಾಳೆ.

Share