ಶ್ರೀ ಪ್ರಸನ್ನೇಶ್ವರ ದೇವಾಲಯದಲ್ಲಿ ಹನುಮ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ,ವಿಜಯಪುರ,ಏ. 1:
ನಗರದ ಝೆಂಡಾಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿ ಇರುವ ಶ್ರೀ ಪ್ರಸನ್ನೇಶ್ವರ-ಶ್ರೀ ಪ್ರಸನ್ನಾಂಜನೇಯ ಹಾಗೂ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಹನುಮ ಜಯಂತಿಯನ್ನುಯ ಸಂಭ್ರಮದಿಂದ ಆಚರಿಸಲಾಯಿತು.
ಅದರಂಗವಾಗಿ ಬೆಳಿಗ್ಗೆ ಸುಪ್ರಭಾತದ ಬಳಿಕ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಶ್ರೀ ಬಾಲ ಹನುಮನ ತೊಟ್ಟಿಲೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.
ಶ್ರಿ ಪ್ರಸನ್ನೇಶ್ವರ ಸೇವಾ ಭಜನಾ ಮಂಡಳಿ ಸದಸ್ಯರಿಂದ ರಾಮನಾಮದ ಭಕ್ತಿ ಸಂಗೀತ ಸೇವೆ ಅತ್ಯಂತ ಸುಶ್ರಾವ್ಯವಾಗಿ ನಡೆದು ಭಕ್ತರ ಭಕ್ತಿಯ ಪರಾಕಾಷ್ಟೆ ಮೆರೆಯಿತು.
ವಾಯುಪುತ್ರನ ತೊಟ್ಟಿಲೋತ್ಸವದ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಬಾಲ ರಾಮನ ಸುಂದರ ರೂಪವನ್ನು ಮನದಲ್ಲಿ ತುಂಬಿಕೊಂಡರು. ವಿದ್ವಾನ್ ಪ್ರಕಾಶಾಚಾರ್ಯ ಮದಭಾವಿ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿಕ್ಯಾಬ್ ಕಾಲೇಜಿನ ಉಪನ್ಯಾಸಕ ಪ್ರೊ. ಯು ಎನ್ ಕುಂಟೋಜಿ ಮಾತನಾಡಿ, ಹನುಮಂತನ ರೋಮ ರೋಮಗಳಲ್ಲಿ ಶ್ರೀರಾಮನ ರೂಪ ಕಾಣುತ್ತೇವೆ. ಹನುಮಂತನೆಂದರೆ ಶಕ್ತಿ ಭಕ್ತಿಯ ಪ್ರತಿರೂಪ ಎಂದರು.
ಸಾಹಿತಿ ಕುರ್ಲೆ ಅವರು ಹನುಮನ ಭಕ್ತಿ ಗೀತೆ ಹಾಡುವ ಮೂಲಕ ತಮ್ಮ ಸೇವೆ ಸರ್ಮಪಿಸಿದರು.
ಸೇವಾಕರ್ತ ನಾಗೇಶರಾವ ಕುಲಕರ್ಣಿ ಸೇರಿದಂತೆ ವಾಮನರಾವ ಕುಲಕರ್ಣಿ, ರಾಮರಾವ ಕುಲಕರ್ಣಿ(ತಾಂಬಾ), ಜಗನ್ನಾಥ ಕುಲಕರ್ಣಿ, ಆನಂದರಾವ ಗಾಯಿ, ಅಪ್ಪಣ್ಣ ಗಾಯಿ, ಅನಿತಾ ಗಾಯಿ, ಸಂತೋಷ ಕಠಾವಿ, ಅಶ್ವಿನಿ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದರು.

Share this