ಸಪ್ತಸಾಗರ ವಾರ್ತೆ ವಿಜಯಪುರ, ಆ. 31: 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿರುವ ಒಂದು ಕೋಮಿನ ಹಬ್ಬದ ತಿಳಿವಳಿಕೆ ವಿಷಯವನ್ನು ಕೂಡಲೇ ತೆಗೆದು ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾಯಿಸಿದ್ದಾರೆ.
21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿ ಒಂದು ಕೋಮಿನ ಹಬ್ಬವನ್ನು ತಿಳಿದುಕೊಳ್ಳಲು ನಿರ್ದೇಶಿಸಲಾಗಿದೆ. ಓದುವ ಅಭಿಯಾನವನ್ನು ಸರ್ಕಾರ ಪರಿಚಯಿಸಿದ್ದರೆ ಅದರಲ್ಲಿ ಪ್ರಚಲಿತ ವಿದ್ಯಮಾನ, ಕನ್ನಡ ಸಾಹಿತ್ಯ, ವಿಜ್ಞಾನ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಓದಲು ಉತ್ತೇಜಿಸಬೇಕೇ ಹೊರತು ಯಾವುದೋ ಒಂದು ಕೋಮಿನ ಓಲೈಕೆಗೆ ಅವರ ಹಬ್ಬದ ಬಗ್ಗೆ ತಿಳಿವಳಿಕೆ ನೀಡುವುದರಿಂದ ಮಕ್ಕಳ ಜ್ಞಾನವಾಗಲಿ, ಬೌದ್ಧಿಕ ಮಟ್ಟವಾಗಲಿ ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಈ ರೀತಿಯಾದ ಓಲೈಕೆ ರಾಜಕಾರಣವನ್ನು ಬಿಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತ ಪಠ್ಯಕ್ರಮವನ್ನು, ವಿಷಯಗಳನ್ನು ಪರಿಚಯಿಸಲಿ. ಹಾಗೆಯೇ, ಚಟುವಟಿಕೆ ಮಾರ್ಗದರ್ಶಿಯಲ್ಲಿ ಕೂಡಲೇ ಒಂದು ಕೋಮಿನ ಹಬ್ಬದ ತಿಳಿವಳಿಕೆ ವಿಷಯವನ್ನು ತೆಗೆದು ಹಾಕಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಓದುವ ಅಭಿಯಾನದಲ್ಲಿ ಒಂದು ಕೋಮಿನ ಹಬ್ಬಗಳ ಪರಿಚಯ ತೆಗೆದು ಹಾಕಿ: ಶಾಸಕ ಯತ್ನಾಳ ಒತ್ತಾಯ
