ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 18: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು.
ಧರಣಿ ಸತ್ಯಾಗ್ರಹ ಉದ್ದೇಶಿಸಿ ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಸರಕಾರಿ ಆಸ್ಪತ್ರೆಗೆ ಸೂಕ್ತವಾದ ಸುಮಾರು ೧೪೯ ಎಕರೆಗೂ ಹೆಚ್ಚು ಸ್ಥಳಾವಕಾಶ ಸರಕಾರಿ ಆಸ್ಪತ್ರೆಯ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಸರ್ಕಾರ ಇದನ್ನು ಗುರುತಿಸಿ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕು. ಪಿಪಿಪಿ ಮಾದರಿಯನ್ನು ಯಾವ ಕಾರಣಕ್ಕೂ ವಿಜಯಪುರದಲ್ಲಿ ತರಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನೋರ್ವ ಮುಖಂಡ ಅಣ್ಣರಾಯ ಈಳಗೇರ ಮಾತನಾಡಿ, ಒಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗು ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ. ಮತ್ತು ಇದು ಮುಂದೆ ಕ್ರಮೇಣ ಸಂಪೂರ್ಣ ಖಾಸಗೀಕರಣಗೊಂಡು ಬಡವರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುತ್ತದೆೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಹೇಳಿದರು.
ಜಗದೀಶ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ೧೫೦ ಕ್ಕೂ ಅಧಿಕ ಎಕರೆ ಜಾಗವಿರುವ ಏಕೈಕ ಜಿಲ್ಲೆ ಇದಾಗಿದ್ದು, ವಿದ್ಯಾರ್ಥಿ ಯುವಕರು ಇದರ ವಿರುದ್ದ ಗಟ್ಟಿ ಧ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್ ಗೆ ಕರೆ ಕೊಡಬೇಕಾಗುತ್ತದೆ ಎಂದರು.
ಸುರೇಶ ಬಿಜಾಪುರ ಮಾತನಾಡಿ, ವಿಜಯಪುರ ಜಿಲ್ಲೆಯ ಜನರು ಉದ್ದೇಶಿತ ಖಾಸಗಿ ಸಹಭಾಗಿತ್ವದಡಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದನ್ನು ತೀವ್ರವಾಗಿ ವಿರೋಧಿಸಿ ಹೋರಾಟವನ್ನು ಮಾಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಎಲ್ಲ ಸಂಘ ಸಂಸ್ಥೆಗಳು ತೀವ್ರ ಪ್ರತಿರೋಧವನ್ನು ತೋರಿಸಿದ್ದಾರೆ. ಕೆಲವು ಜನಪ್ರತಿನಿಧಿಗಳು ಈ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್) ಮಾದರಿಯನ್ನೂ ವಿರೋಧಿಸಿದ್ದಾರೆ. ಹೀಗಿರುವಾಗ ರಾಜ್ಯ ಸರಕಾರ ಹಠಾತ್ ಆಗಿ ಪಿಪಿಪಿ ಯೋಜನೆ ಅನುಷ್ಠಾನಗೊಳಿಸಲು ನೊಡಲ್ ಅಧಿಕಾರಿ ನೇಮಕಮಾಡಿರುವುದು ಏಕಪಕ್ಷೀಯ ಮತ್ತು ಅಪ್ರಜಾತಾಂತ್ರಿಕ ಕ್ರಮವಾಗಿದ್ದು, ಕೂಡಲೇ ಸರಕಾರ ಈ ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ವಿದ್ಯಾವತಿ ಅಂಕ¯ಲಗಿ ಅವರು ಮಾತನಾಡಿ, ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯನ್ನು ಅಳವಡಿಸಲು ಬಿಡಬಾರದು. ಇದರ ವಿರುದ್ದ ಹೋರಾಟಕ್ಕೆ ಜಿಲ್ಲೆಯ ಜನತೆ ಅಣಿಯಾಗಬೇಕೆಂದು ಹೋರಾಟ ಸಮಿತಿಯು ಕರೆ ನೀಡುತ್ತದೆ.
ಶ್ರೀನಾಥ ಪೂಜಾರಿ, ಸರಕಾರ ಖಾಸಗಿ ವ್ಯಕ್ತಿಗಳ ಮುಂದೆ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಸರಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಹಲವಾರು ವರ್ಷಗಳ ಬೇಡಿಕೆಯಾಗಿ ಉಳಿದಿಲ್ಲ. ಬದಲಾಗಿ ಅದು ಈಗ ಜಿಲ್ಲೆಯ ಜನರ ಭಾವನೆಯಾಗಿ ಪರಿವರ್ತನೆಗೊಂಡಿದೆ. ಇದನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಅಲ್ಲೇ ಇದ್ದ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರು ಮನವಿ ಮಾಡಬೇಕಿತ್ತು, ಒತ್ತಡ ಹೇರಬೇಕಿತ್ತು. ಆದರೆ ಇವರುಗಳು ಅಸಹಾಯಕರಂತೆ ನಿಂತಿದ್ದು ದೊಡ್ಡ ದುರಂತವಾಗಿದೆ ಎಂದು ಹೇಳಿದರು.
ಒಂದು ವೇಳೆ ಸರ್ಕಾರ ಖಾಸಗಿ ಸಹಭಾಗಿತ್ವವನ್ನು ಹಿಂದೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ, ಅನಿಲ ಹೊಸಮನಿ, ಅಕ್ರಮ ಮಾಶಾಳಕರ, ಮಲ್ಲಿಕಾರ್ಜುನ ಕೆಂಗನಾಳ, ಲಲಿತಾ ಬಿಜ್ಜರಗಿ, ಜಗದೇವ ಸೂರ್ಯವಂಶಿ, ಶ್ರೀನಾಥ ಪೂಜಾರಿ, ದಸ್ತಗೀರ ಉಕ್ಕಲಿ, ಗೀತಾ ಹೆಚ್, ಮಹದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಬಟಗಿ, ಬಾಬುರಾವ ಬೀರಕಬ್ಬಿ, ಸಿದ್ರಾಮ ಹಿರೇಮಠ, ಪ್ರಭುಗೌಡ ಪಾಟೀಲ, ಅಬ್ದುಲ್ ರೆಹಮಾನ್ ನಾಸಿರ, ಸುರೇಶ ಬಿಜಾಪುರ, ಸಿದ್ದನಗೌಡ ಪಾಟೀಲ, ಲಕ್ಷ್ಮಣ ಕಂಬಾಗಿ, ರೆಹಮಾನ್, ನೀಲಾಂಬಿಕ ಬಿರಾದಾರ, ಬಸೀರ ಅಹ್ಮದ್ ತಾಂಬೆ, ಲಕ್ಷ್ಮಣ ಹಂದ್ರಾಳ, ಸಂಜೀವ ಕಂಬಾಗಿ, ಮಲ್ಲಿಕಾರ್ಜುನ ಹೆಚ್. ಟಿ, ವೆಂಕಟೇಶ ವಗ್ಗನ್ನವರ, ಎನ್.ಎಮ್. ಹರನಾಳ, ರೇಣುಕಾ ಕೋಟ್ಯಾಳ, ಸಿಸ್ಟರ್ ಸಿಂಥಿಯಾ ಪೆರಾರಿ, ಕಾಮಿನಿ ಕಸಬೆ, ಶೋಭಾ ವಾಲಿಕಾರ, ಶ್ರೀಧರ ಕೊಣ್ಣೂರ, ಗೀತಾ ಕಟ್ಟಿ, ರವಿ ಕಟ್ಟಿಮನಿ, ಜಯಶ್ರೀ ಚಲವಾದಿ, ಸುನೀತಾ ಮೋರೆ, ಚಂದು ಜಾಧವ, ಸರೋಜಾ ಕಟ್ಟಿಮನಿ, ಶಾಂತಾ ಹೊಸಮನಿ, ಹಮೀದಾ ಪಟೇಲ ಮುಂತಾದವರು ಭಾಗವಹಿಸಿದ್ದರು.
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಗ್ರಹಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ
