ಖರ್ಗೆ ಪ್ರಧಾನಿಗೆ ಕ್ಷಮೆ ಯಾಚಿಸಬೇಕು: ಸಂಸದ ಜಿಗಜಿಣಗಿ ಒತ್ತಾಯ

ಸಪ್ತಸಾಗರ ವಾರ್ತೆ, ಜು. 21:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕವಚನ ಪದ ಬಳಕೆ ಮಾಡಿರುವುದು ಅತ್ಯಂತ ಖಂಡನೀಯ. ಕೂಡಲೆ ಖರ್ಗೆಯವರು ಪ್ರಧಾನಿ ಕ್ಷಮೆ ಕೇಳಬೇಕೆಂದು ಸಂಸದ ರಮೇಶ ಜಿಗಜಿಣಗಿ ಅವರು ಒತ್ತಾಯಿಸಿದ್ದಾರೆ.
ಇಡೀ ವಿಶ್ವದ ನಾಯಕರೇ ಅತ್ಯಂತ ಗೌರವ ತೋರುವ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕ ವಚನ ಪದ ಪ್ರಯೋಗಿಸಿ ಟೀಕೆ ಮಾಡುತ್ತಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಅವರಿಗೆ ಶೋಭೆ ತರುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯವನ್ನು ವಿಶ್ವವೇ ಮೆಚ್ಚಿದೆ. ಬಡವರ ಪರ, ಅಭಿವೃದ್ಧಿ ಪರ‌ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿರುವ ಮೋದಿ ಅವರು ರಜೆ ಸಹ ಹಾಕದೇ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಪದೇ ಪದೇ ಟೀಕಿಸುವ ಕಾರ್ಯ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮ ಖಂಡನೀಯ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಸಂಪೂರ್ಣ ನಿಸ್ತೇಜವಾಗಿದೆ. ಅಭಿವೃದ್ಧಿ ಕಾರ್ಯಗಳೇ ಕುಂಠಿತವಾಗಿವೆ. ಬಡವರ ಆಶ್ರಯ ‌ಮನೆಗಳನ್ನು ವಿತರಿಸಲು ಲಂಚದ‌ ಸದ್ದು ಕೇಳಿ ಬರುತ್ತಿದೆ. ಅವರ ಪಕ್ಷದ ಸದಸ್ಯರೇ ಈ ವಿಷಯವನ್ನು ಹೊರ ಹಾಕಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿಯಾಗುವ ತಂಡ, ಅಸಮಾಧಾನ, ವೈಮನಸ್ಸು ಹೀಗೆ ತಮ್ಮ ಪಕ್ಷದಲ್ಲಿಯೇ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ. ಜನರ ಹಿತ ಮರೆತಿರುವ‌ ರಾಜ್ಯ ಸರ್ಕಾರದ ಕಿವಿ ಹಿಂಡಲಿ. ಅದನ್ನು ಬಿಟ್ಟು ಕೇವಲ ಪ್ರಧಾನಿ ಅವರನ್ನು ಟೀಕೆ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆ ಸಹಜ. ಆದರೆ ಟೀಕೆ ಸಾತ್ವಿಕವಾಗಿರಬೇಕು. ಅಸಂಸದೀಯ ಪದ ಬಳಕೆ ಯಾರಿಗೂ ಒಳ್ಳೆಯದಲ್ಲ ಎಂದು ಜಿಗಜಿಣಗಿ ತಿಳಿಸಿದ್ದಾರೆ. ಅಸಂಸದೀಯ ಪದ, ಏಕವಚನ ಪದ ಪ್ರಯೋಗಿಸಿ ಒಬ್ಬ ಪ್ರಧಾನಿಯನ್ನು ಟೀಕಿಸುವುದು ಖರ್ಗೆ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಈ ರೀತಿ ಇನ್ನು ಮುಂದೆ ಪ್ರಧಾನಿ ಅವರ ಬಗ್ಗೆ ಅಗೌರವ ತೋರುವ ರೀತಿಯಲ್ಲಿ ಟೀಕೆ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.

Share