ಸಪ್ತಸಾಗರ ವಾರ್ತೆ ವಿಜಯಪುರ, ಡಿ. 3: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಬುಧವಾರ 77ನೇ ದಿನಕ್ಕೆ ಕಾಲಿಟ್ಟಿದೆ.
ಡಿಸೆಂಬರ್ 1 ರಂದು ವಿಜಯಪುರ ನಗರದಲ್ಲಿ ನಡೆದ ಜನಾಕ್ರೋಶ ಮೆರವಣಿಗೆ ಸಂಪೂರ್ಣ ಯಶಸ್ವೀಯಾಗಿದ್ದು, ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಮೆರವಣಿಗೆಯಲ್ಲಿ ಸಚಿವರ, ಶಾಸಕರ ಪ್ರತಿಕೃತಿ ದಹನ ಮಾಡಿದ ಹಿನ್ನಲೆ ಇಂದು ಪಿಂಡ ಪ್ರದಾನ ಮಾಡಲು ಮುಂದಾದಾಗ, ಪೊಲೀಸ್ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರ ಒತ್ತಡಕ್ಕೆ ಹೋರಾಟಗಾರರು ಖಂಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಜನತೆಯ ದೀರ್ಘಕಾಲದ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹೋರಾಟವನ್ನು ಉದ್ದೇಶಿಸಿ ಅರವಿಂದ ಕುಲಕರ್ಣಿ ಮಾತನಾಡಿ, ಹೋರಾಟಕ್ಕೆ ರಾಜ್ಯ ಸರ್ಕಾರವು ಪೊಲೀಸ್ ಬಲವನ್ನೇ ಇಂದು ದುರುಪಯೋಗಪಡಿಸಿಕೊಂಡು ದಬ್ಬಾಳಿಕೆ, ತಾಕೀತು ನಡೆಸುತ್ತಿದೆ ಎಂಬುದು ಅತ್ಯಂತ ಖೇದಕರ ಮತ್ತು ಖಂಡನೀಯ ಎಂದು ಹೇಳಿದರು.
77ನೇ ದಿನದ ಹೋರಾಟಕ್ಕೆ ಬೆಳಗ್ಗೆಯಿಂದಲೇ ಧರಣಿ ನಡೆಸುತ್ತಿರುವ ಹೋರಾಟಗಾರರ ಸುತ್ತಲೂ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿ ಸರ್ಪಗಾವಲು ಒಡ್ಡಲಾಗಿದೆ. ಧರಣಿ ಟೆಂಟ್ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಬೆದರಿಕೆ ಹಾಕಲಾಗುತ್ತಿದೆ. ಶಾಂತಿಯುತವಾಗಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಹೋರಾಟಕ್ಕೆ ಇಂತಹ ದಬ್ಬಾಳಿಕೆ ಒಡ್ಡುವುದು ಸಂವಿಧಾನ ಬದ್ಧ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.
ಇದರ ಹಿನ್ನೆಲೆಯಲ್ಲಿ ಉನ್ನತ ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ, ಈ ಎಲ್ಲಾ ಒತ್ತಡಕ್ಕೂ ಮುಖ್ಯ ಕಾರಣ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರೇ ಎಂಬುದು ಬಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬಂದರೆ ತಮ್ಮ ಖಾಸಗಿ ವೈದ್ಯಕೀಯ ಕಾಲೇಜಿನ ವ್ಯಾಪಾರಕ್ಕೆ ಧಕ್ಕೆ ಬರುತ್ತದೆ ಎಂಬ ಆತಂಕದಿಂದಲೇ ಸಚಿವರು ಈ ಹೋರಾಟವನ್ನು ಹತ್ತಿಕ್ಕಲು ಪೊಲೀಸ ಬಲವನ್ನು ಬಳಸಿಕೊಂಡು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಹಿರಿಯ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಜನತೆ, ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಕೇಳುತ್ತಿರುವುದು ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಅಲ್ಲ. ಬಡ-ಬಳಲಿದ ಜನರಿಗೆ ಗುಣಮಟ್ಟದ ಆರೋಗ್ಯ ಶಿಕ್ಷಣ ಮತ್ತು ಚಿಕಿತ್ಸೆ ದೊರೆಯಬೇಕು ಎಂಬ ಏಕೈಕ ಉದ್ದೇಶಕ್ಕಾಗಿ. ಆದರೆ ಈ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿ, ಖಾಸಗಿ ವ್ಯಾಪಾರಿ ಆಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಸಚಿವರೇ ಪೊಲೀಸರನ್ನು ಬಳಸಿಕೊಳ್ಳಲು ಮುಂದಾಗಿರುವುದು ರಾಜ್ಯದ ಹಾಗೂ ಜಿಲ್ಲೆಯ ಜನತೆಯನ್ನು ತೀವ್ರ ನಿರಾಸೆಗೀಡು ಮಾಡಿದೆ ಎಂದರು.
ಈ ಕೂಡಲೇ ಪೊಲೀಸರ ಸರ್ಪಗಾವಲು ಹಿಂಪಡೆಯಬೇಕು. ಧರಣಿಯ ಮೇಲಿನ ಎಲ್ಲಾ ಬೆದರಿಕೆ ನಿಲ್ಲಬೇಕು ಮತ್ತು ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದು ಹೋರಾಟಗಾರರು ಹೇಳಿದರು.
ಈ ಹೋರಾಟ ಜನತೆಯ ಹೋರಾಟ, ಇದನ್ನು ಯಾವುದೇ ಒತ್ತಡಕ್ಕೂ ಬಗ್ಗದೆ ಮುಂದುವರಿಸುತ್ತೇವೆ ಎಂದು ಹೋರಾಟಗಾರರು ಹೇಳಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜ್ : ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ


