ಸಮಾಜ ಸುಧಾರಣೆಗಾಗಿ ನಾರಾಯಣ ಗುರುಗಳ ಸೇವೆ ಅನನ್ಯ -ಸೋಮಲಿಂಗ ಗೆಣ್ಣೂರ

ಸಪ್ತಸಾಗರ ವಾರ್ತೆ ವಿಜಯಪುರ ಸೆ.7: ಅಂದಿನ ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಮೌಢ್ಯತೆ, ಅಸಮಾನತೆ ನಿವಾರಿಸುವ ಮೂಲಕ ಸಮಾಜ ಸುಧಾರಣೆಗಾಗಿ ಬ್ರಹ್ಮಶ್ರೀ ನಾರಾಯಣಗುರುಗಳು ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೌಢ್ಯತೆ, ಶೋಷಣೆಗಳಿಂದ ತುಂಬಿದ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಬ್ರಹ್ಮಶ್ರೀ ಅವರ ಆದರ್ಶ-ವಿಚಾರಗಳ ಬಗ್ಗೆ ಅರಿವು ಹೊಂದಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲ್ಲಿ ನಡೆಯಬೇಕು. ಸರ್ವರ ಒಳಿತಿಗಾಗಿ ಶ್ರಮಿಸಿದ ಅವರು ಮಾನವ ಜನಾಂಗದ ಗುರು ಆಗಿದ್ದಾರೆ. ಅವರು ಅನೇಕ ಸಮಾಜಮುಖಿ ಸುಧಾರಣೆಗಾಗಿ ಶ್ರಮಿಸಿದ್ದಾರೆ. ನಾರಾಯಣ ಗುರುಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ಎಲ್ಲರಿಗೂ ಆದರ್ಶಪ್ರಾಯರಾದ ಸಮಾಜ ಸುಧಾರಕರಾಗಿದ್ದರು. ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರ ಆದರ್ಶ ಜೀವನ ಚರಿತೆಯನು ನಾವು ಅರಿಯಬೇಕಾಗಿದೆ. ಬ್ರಹ್ಮಶ್ರೀ ನಾರಾಯಣ ಗುರಗಳವರ ತತ್ವಾದರ್ಶಗಳು, ಚಿಂತನೆಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಅವರ ತತ್ವಾದರ್ಶದಲ್ಲಿ ನಡೆದು ಸಶಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅವರು ಹೇಳಿದರು.
ಡಾ. ಎಂ.ಎಸ್. ಮಾಗಣಗೇರಿ ಅವರು ವಿಶೇಷ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಅಸಮಾನತೆ ಹಾಗೂ ಶೋಷಣೆ ವಿರುದ್ಧ ಹೋರಾಡಿ, ಎಲ್ಲರೂ ಪರಸ್ಪರ ಗೌರವಿಸುವಂತಹ ಸಮ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದವರು. ಅವರು ಶಿಕ್ಷಣದ ಮಹತ್ವದ ಕುರಿತು ತಿಳಿಸಿದ್ದಾರೆ ಎಂದು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳು ಅದ್ದೂರಿ ವಿವಾಹ, ಮಹಿಳೆಯರ ಶೋಷಣೆಗಳ, ಸಮಾಜದಲ್ಲಿನ ಮೌಢ್ಯತೆಗಳಂತಹ ಅನಿಷ್ಟ ಪದ್ಧತಿ ವಿರೋಧಿಸಿ ಅವುಗಳನ್ನು ತೊಡೆದು ಹಾಕಲು ಶಿಕ್ಷಣದಿಂದಲೇ ಸಾಧ್ಯ ಎಂದು ಪ್ರತಿಪಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು.ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಚಂದ್ರಕಾಂತ ಕುಂಬಾರ ವಂದಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಎಂ.ಎ.ಉಪಾಸೆ, ಬಸವರಾಜ ಈಳಿಗೇರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಚಾಲನೆ ನೀಡಿದರು. ಮೆರವಣಿಗೆಯೂ ಕಲಾಮೇಳ ಹಾಗೂ ಕಲಾ ತಂಡಗಳೊಂದಿಗೆ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿರ ತಲುಪಿ, ಸಮಾವೇಶಗೊಂಡಿತು.

Share