ಪಿಪಿಪಿ ಬಿಜೆಪಿ ಕೂಸು:ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 23 :
ಪಿಪಿಪಿ ಬಿಜೆಪಿ ಹಾಗೂ ಮೋದಿ ಅವರ ಕೂಸು. ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದ್ದೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಸೋಮವಾರ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹೋರಾಟಗಾರರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ನಮ್ಮವರು. ಆದರೆ ಹೋರಾಟಗಾರರನ್ನು ದಿಕ್ಕು ತಪ್ಪಿಸುತ್ತಿರುವ ಕೆಲವು ಬಿಜೆಪಿ ನಾಯಕರು ಮೊದಲು ಹೋಗಿ ಪ್ರಧಾನಿ ಅವರನ್ನು ಖಾಸಗೀಕರಣದ ಬಗ್ಗೆ ಪ್ರಶ್ನೆ ಮಾಡಲಿ ಎಂದು ಹೇಳಿದರು.
ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿಯ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಹೊರಡಿಸಲಾದ ಅಧಿಸೂಚನೆ ಮೊದಲಾದ ದಾಖಲಾತಿಗಳನ್ನು ಪ್ರದರ್ಶಿಸಿದರು. ಈ ಬಗ್ಗೆ ಸದನದಲ್ಲಿಯೂ ಬಿಜೆಪಿ ನಾಯಕರು ಬಿಜೆಪಿ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆ ದಾಖಲಾತಿಯೂ ನನ್ನ ಬಳಿ ಇದೆ. ಇಷ್ಟೆಲ್ಲ ಇರುವಾಗ ವಿನಾಕಾರಣ ಹೋರಾಟಗಾರರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಹೇಳಿದರು.
ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡುವ ಹೋರಾಟ ನ್ಯಾಯಯುತ, ಅವರು ಕೇಳುತ್ತಿರುವುದರಲ್ಲಿ ತಪ್ಪಿಲ್ಲ. ನಾನೂ ಸಹ ಆ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿರುವೆ. ಹೋರಾಟಗಾರರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಹೋರಾಟಗಾರರೆಲ್ಲ ನಮ್ಮವರೇ. ಆದರೆ ಹೋರಾಟಗಾರರ ದಿಕ್ಕು ತಪ್ಪಿಸುತ್ತಿರುವ ಕೆಲವು ಬಿಜೆಪಿ ಫುಡಾರಿಗಳು ಅವರ ದಿಕ್ಕು ತಪ್ಪಿಸುತ್ತಿದ್ದಾರೆ. ಪಿಪಿಪಿ ಬಗ್ಗೆ ಅವರದ್ದೇ ಸರ್ಕಾರ ಮಾಡಿದ್ದು, ಮೊದಲು ಹೋಗಿ ಮೋದಿಜಿ ಅವರನ್ನು ಪಿಪಿಪಿ ಬಗ್ಗೆ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಅವಧಿಯ ಸರ್ಕಾರದಲ್ಲಿ ಮೇ.9ರ 2022 ರಂದು ಸರ್ಕಾರ ಅಧಿಸೂಚನೆ ಹೊರಡಿಸಿ ರಾಜ್ಯದ 11 ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳು ಆರಂಭಿಸಲು ಹಾಗೂ ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಿಸಲು ಐ-ಡೆಕ್ ಸೇವೆಯನ್ನು 324.50 ಲಕ್ಷ ರೂ. ವೆಚ್ಚದಲ್ಲಿ ಟ್ರಾನ್ಸ್ಜೆಕ್ಷನ್ ಅಡವೈಸರ್ ಆಗಿ ಪಡೆಯಲು ಅಧಿಸೂಚನೆ ಹೊರಡಿಸಿದ ಮಹತ್ವದ ದಾಖಲೆಗಳನ್ನು ಸಹ ಪ್ರದರ್ಶಿಸಿದರು. ಅದಕ್ಕೆ ಪೂರಕವಾದ ನೀಲನಕ್ಷೆ ಮೊದಲಾದ ಸಮಗ್ರ ವಿವರಗಳನ್ನು ಒದಗಿಸಿದರು.
ನಾನು ಬಿಎಲ್‌ಡಿಇ ಸಂಸ್ಥೆಯಿಂದಲೋ ಮೆಡಿಕಲ್ ಕಾಲೇಜು ಮಾಡಬೇಕೆನ್ನುವ ಯಾವ ಉಮೇದು ಇಲ್ಲ. ಇದರ ಅವಶ್ಯಕತೆಯೂ ಇಲ್ಲ. ಇನ್ನೊಂದು ಪಿಪಿಪಿಯಾದರೂ ಸಹ ಸರ್ಕಾರಿ ಕೋಟಾ ಮೆಡಿಕಲ್ ಸೀಟುಗಳಿಗೆ ಯಾವ ಬಾಧ್ಯತೆಯೂ ಇಲ್ಲ. ಆದರೆ ನಾನೂ ಸಹ ಸರ್ಕಾರಿ ಮೆಡಿಕಲ್ ಕಾಲೇಜ್ ಪರವಾಗಿಯೇ ಇದ್ದೇನೆ. ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಧ್ವನಿ ಎತ್ತಿರುವೆ. ವಿಜಯಪುರದ ಇನ್ನೋರ್ವ ಸಚಿವ ಸಂಪುಟ ಸಹುದ್ಯೋಗಿಗೂ ಕೇಳಿ ನೋಡಿ ಎಂದರು.
ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವೆ. ಈ ಹಿಂದೆಯೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿರುವೆ. ಆದರೆ ಅಂದು ಮುಖ್ಯಮಂತ್ರಿಗಳ ಧರ್ಮಪತ್ನಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಧಾವಂತದಲ್ಲಿದ್ದರು. ಸರಣಿ ಸಭೆಗಳು ಸಹ ಆ ದಿನ ಇದ್ದವು. ಆದರೂ ಹೋರಾಟಗಾರರನ್ನು ಗೌರವಯುತವಾಗಿಯೇ ಚರ್ಚೆ ನಡೆಸಲಾಗಿದೆ. ಈಗ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ದಿನಾಂಕ ಅಥವಾ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿಸಲಾಗುವುದು. ಈ ಬಾರಿ ನಾನು ಸಹ ಹೋರಾಟಗಾರರ ಪರವಾಗಿ ಪ್ರಬಲವಾಗಿ ನಮಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಒತ್ತಡ ತರುವೆ ಎಂದರು.
ಇನ್ನೂ ಮುಖ್ಯಮಂತ್ರಿಗಳು ಲಿಖಿತವಾಗಿ ಬರೆದುಕೊಡಬೇಕು. ಸ್ಥಳಕ್ಕೆ ಭೇಟಿ ನೀಡಬೇಕು ಎಂಬುದರಲ್ಲಿ ಅರ್ಥವಿಲ್ಲ. ಅವರು ಖಂಡಿತವಾಗಿಯೂ ನಮಗೆ ಸ್ಪಂದಿಸುತ್ತಾರೆ ಎಂದು ಭರವಸೆ ನೀಡಿದರು.

Share this