ಗ್ರಾಮೀಣ ಆಟಗಳಿಗೆ ಆದ್ಯತೆ ನೀಡಬೇಕು-ಪ್ರಭುಲಿಂಗ ಹಂಡಿ

ಸಪ್ತಸಾಗರ ವಾರ್ತೆ ವಿಜಯಪುರ, ಅ. 20: ಪ್ರತಿವರ್ಷದಂತೆ ಈ ವರ್ಷವು ಕೂಡ ದೀಪಾವಳಿ ಹಬ್ಬದ ನಿಮಿತ್ತ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಗ್ರಾಮೀಣ ಆಟಗಳಿಗೆ ಆದ್ಯತೆ ನೀಡಬೇಕು ಎಂದು ಜಾತ್ರಾ ಕಮೀಟಿಯ ಅಧ್ಯಕ್ಷ
ಪ್ರಭುಲಿಂಗ ಹಂಡಿ ಹೇಳಿದರು.
ಸೋಮವಾರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಅಂಗವಾಗಿ ಶ್ರೀ ಭೀರದೇವರ ಮತ್ತು ಶ್ರೀ ಪರಮಾನಂದ ದೇವರ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡ 8 ಕಿಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಟಗಳು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ದೇಶೀಯ ಆಟಗಳಿಗೆ ಒತ್ತು ನೀಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಆಟಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಆಟಗಳು ಏಕಾಗ್ರತೆ, ಸಮಯ ನಿರ್ವಹಣೆ, ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅವು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದು, ದೈನಂದಿನ ಬದುಕಿನಲ್ಲಿ ಎಲ್ಲರೂ ಆಟಕ್ಕೂ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಟ್ರೋಫಿ ವಿತರಿಸಿ ಮಾತನಾಡಿದ ಮಹಾದೇವ ಹಂಡಿ, ಆಟಗಳು ಯುವ ಶಕ್ತಿಯನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ ಹಾಗೆಯೇ ಮಾದಕ ವ್ಯಸನದಿಂದ ದೂರವಿರಲು ಸಹಾಯ ಮಾಡುತ್ತವೆ ಎಂದರು.
ಶ್ರೀ ಪರಮಾನಂದ ದೇವರ ಪಟ್ಟದ ಪೂಜಾರಿಗಳಾದ ಶರಣಬಸು ಪೂಜಾರಿ ಅವರು ಓಟದ ಸ್ಪರ್ಧೆಗೆ ಚಾಲನೆ ನೀಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಬಡಚಿಯ ಶಿವಾನಂದ ಚಿಗರಿ, ಕನ್ನೊಳ್ಳಿಯ ರೇವಣಸಿದ್ದಪ್ಪ ಸರಮಾ, ಜಮಖಂಡಿಯ ಈರಪ್ಪ ಹಲಗಣ್ಣವರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು.ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಶಿಕ್ಷಕ ಸಂಗಮೇಶ ಬಂಡೆ ನಿರ್ವಹಿಸಿದರು.

Share this