ಸಂಕ್ರಾಂತಿ: ವಿಜಯಪುರ-ಬೆಂಗಳೂರು ಮಧ್ಯೆ ವಿಶೇಷ ರೈಲು

ಸಪ್ತಸಾಗರ ವಾರ್ತೆ, ವಿಜಯಪುರ, ಜ. 2: ವಿಜಯಪುರ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರ-ಬೆಂಗಳೂರಿಗೆ ಸಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿಶೇಷ ರೈಲು ಸೇವೆ ಒದಗಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಈ ರೈಲು ಸಂಚಾರ ಆರಂಭಿಸಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರದಿಂದ ಬೆಂಗಳೂರು ಪ್ರಯಾಣ ಬೆಳೆಸುವವರ ಸಂಖ್ಯೆ ಅಧಿಕ, ಸಂಕ್ರಾಂತಿ ಸೇರಿದಂತೆ ಬರುವ ಹಬ್ಬಗಳಿಗೆ ಅನೇಕರು ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಈ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಿಶೇಷ ರೈಲು ಸೇವೆ ಆರಂಭಿಸಲು ಕೇಂದ್ರ ರೈಲ್ವೇ ಇಲಾಖೆ ಅಸ್ತು ಎಂದಿದ್ದು, ಸಂಕ್ರಾಂತಿ ಹಬ್ಬದ ವೇಳೆಯಲ್ಲಿ ಈ ವಿಶೇಷ ರೈಲು ಸಂಚಾರ ಆರಂಭವಾಗಲಿದ್ದು, ಗದಗ ಹಾಗೂ ಹುಬ್ಬಳ್ಳಿ ಎರಡು ಬೈಪಾಸ್ ಮಾರ್ಗದ ಮೇಲೆ ಈ ರೈಲು ಸಂಚರಿಸಲಿದೆ, ಮುಂಬರುವ ದಿನಗಳಲ್ಲಿ ಈ ರೈಲ್ವೆ ಸೇವೆಯನ್ನು ಖಾಯಂ ಆಗಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಂಡು ಕೇಂದ್ರ ರೈಲ್ವೇ ಇಲಾಖೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Share this