ಸಪ್ತಸಾಗರ ವಾರ್ತೆ, ವಿಜಯಪುರ, ಜ.3: ಪ್ರತಿ ವರ್ಷದಂತೆ ಈ ವರ್ಷವೂ ವಿಜಯಪುರ ತಾಲೂಕಿನ ತೊರವಿಯಲ್ಲಿ ನಡೆಯುವ ಸಂಕ್ರಮಣ ಸಿದ್ದೇಶ್ವರ ಜಾನುವಾರು ಜಾತ್ರೆ ಜ.10ರಿಂದ 17ರವರೆಗೆ ನಡೆಯಲಿದ್ದು, ಜಾತ್ರೆಯನ್ನು ಅತ್ಯಂತ ಅಚ್ವುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಸಿದ್ದೇಶ್ವರ ಜಾನುವಾರು ಜಾತ್ರೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಾನುವಾರು ಗಡಿ ಭಾಗವಾಗಿರುವುದರಿಂದ ಜಾತ್ರೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಜಾನುವಾರುಗಳು ಆಗಮಿಸಲಿರುವುದರಿಂದ ಸೂಕ್ತ ಲಸಿಕಾಕರಣ, ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಜಾತ್ರೆ ಸ್ಥಳದಲ್ಲಿ ಸ್ವಚ್ಚತೆ, ಒಂದು ವಾರಗಳ ಕಾಲಕ್ಕೂ ಹೆಚ್ಚಿನ ದಿನ ಜಾತ್ರೆ ನಡೆಯುವುದರಿಂದ ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಯಾವುದೇ ಸಮಸ್ಯೆಬಾರದಂತೆ ನೋಡಿಕೊಂಡು ಸುವ್ಯವಸ್ಥಿತವಾಗಿ ಜಾತ್ರೆ ಆಯೋಜಿಸುವಂತೆ ಅವರು ಸೂಚನೆ ನೀಡಿದರು.
ಜಾತ್ರೆಯ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಮುಂಚಿತವಾಗಿ ಔಷದಿ ಸಿಂಪಡಿಸಲು ಅಗತ್ಯ ಕ್ರಮ ವಹಿಸಬೇಕು. ಜಾತ್ರಾ ಸ್ಥಳದಲ್ಲಿ ಕೌಂಟರ್ ತೆಗೆದು ಜಾತ್ರೆಗೆ ಆಗಮಿಸುವ ಜಾನುವಾರಗಳ ವಿವರ ನೋಂದಣಿ ಮಾಡಿಕೊಳ್ಳಬೇಕು. ವ್ಯವಸ್ಥಿತವಾಗಿ ಜಾನುವಾರುಗಳನ್ನು ಕಟ್ಟಲು ಹಾಗೂ ಹೊಸ ಹೊಸ ತಳಿಯ ಜಾನುವಾರುಗಳ ಪ್ರದರ್ಶನ ಹಾಗೂ ಜಾತ್ರೆಯಲ್ಲಿ ವಿವಿಧ ವಸ್ತು ಪ್ರದರ್ಶನ ಮಳಿಗೆಗಳ ಆಯೋಜನೆಗೆ ಹಾಗೂ ಜಾತ್ರೆಗೆ ಆಗಮಿಸುವ ರೈತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೋಳ್ಳಬೇಕು ಎಂದು ತಿಳಿಸಿದರು.
ಸದ್ಯ ಚಳಿಗಾಲವಿದ್ದು ಜಾನುವಾರುಗಳಿಗೆ ರೋಗ-ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಲಸಿಕೆ, ಔಷಧಿಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಸೂಕ್ತ ವೈದ್ಯೋಪಚಾರಕ್ಕೆ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ, 3 ತಂಡಗಳನ್ನು ರಚಿಸಿ ವೈದ್ಯಕೀಯ ಸೇವೆ ಒದಗಿಸಬೇಕು. ಅತಿ ಹೆಚ್ಚು ಜನರು ಭಾಗವಹಿಸುವುದರಿಂದ ಸಾರ್ವಜನಿಕರು, ರೈತರ ಅನುಕೂಲಕ್ಕಾಗಿ ಆರೋಗ್ಯ ತಪಾಸಣಾ ಕೇಂದ್ರ, ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳಿಗೆ ರೋಗಗಳು ಹರಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಔಷಧಿ ಸಿಂಪರಣೆ ಹಾಗೂ ಜಾತ್ರೆಯಲ್ಲಿ ದಿನನಿತ್ಯ ಶೇಖರಣೆಯಾಗುವ ಕಸವನ್ನು ತೆರವುಗೊಳಿಸಿ, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಮಹಾನಗರ ಪಾಲಿಕೆಯಿಂದ ಶೌಚಾಲಯ ವ್ಯವಸ್ಥೆ, ಹೆಸ್ಕಾಂದಿಂದ ವಿದ್ಯುತ್ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.
ಜಾನುವಾರ ಜಾತ್ರೆಗೆ ಹೋಗಿ ಬರಲು ಅನುಕೂಲವಾಗುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕೈಗೊಳ್ಳುವಂತೆಯೂ, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ ನಿಲುಗಡೆ, ಪೊಲೀಸ್ ಬಂದೋಬಸ್ತ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಜಾನುವಾರಗಳ ಮಾರಾಟದ ನಂತರ ರಸೀದಿ ನೀಡುವ ಸಂದರ್ಭದಲ್ಲಿ ವಿವರ ನಮೂದಿಸಿಕೊಳ್ಳಬೇಕು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಡಾ. ಬಸವರಾಜ ಯಲಿಗಾರ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಗೊಣಸಗಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ ನೀಲಗರ, ತಾಲೂಕ ಆರೋಗ್ಯಾಧಿಖಾರಿ ಕೇಸರ್ ಸಿಂಗ್, ಬಿಎಲ್ಡಿಇ ಸಂಸೈಯ ಅಧೀಕ್ಷಕ ಡಾ. ಎಸ್.ಎಂ. ಬಿರಾದಾರ, ಎಪಿಎಂಸಿಯ ಎಇಇ ಎಲ್.ಬಿ.ಲಮಾಣಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಜ.10 ರಿಂದ 17ರವರೆಗೆ ಸಿದ್ದೇಶ್ವರ ಜಾನುವಾರು ಜಾತ್ರೆ: ಅಚ್ಚುಕಟ್ಟು ಆಯೋಜನೆಗೆ ಜಿಲ್ಲಾಧಿಕಾರಿಡಾ. ಆನಂದ ಸೂಚನೆ


