ಸಪ್ತಸಾಗರ ವಾರ್ತೆ ವಿಜಯಪುರ, ಆ. 25:
ಅರಣ್ಯ ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವ ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ತಮ್ಮ ಕರ್ತವ್ಯದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಎಲ್ಲರೂ ಆಟೋಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಂಡು ಕ್ರೀಡಾ ಸ್ಪೂರ್ತಿ ಮೆರೆಯಬೇಕು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬೆಳಗಾವಿ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ಬಸವಾದಿ ಶರಣರ ನುಡಿಯಂತೆ ನಾವು ನಿರ್ವಹಿಸುವ ಕಾರ್ಯವನ್ನು ಅತ್ಯಂತ ನೈತಿಕವಾಗಿ, ಶ್ರದ್ಧೆಯಿಂದ ನಿರ್ವಹಿಸಬೇಕು. ಅರಣ್ಯ ಇಲಾಖೆ ಅರಣ್ಯೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಕೆಲಸಗಳ ಒತ್ತಡದ ಮಧ್ಯೆಯೂ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಆತ್ಮಸ್ಥೈರ್ಯ, ಮುಂದಾಳತ್ವ, ಪರಸ್ಪರ ಪರಿಚಯ ವೃದ್ಧಿಗೆ ಸಹಾಯಕವಾಗಿವೆ. ಕ್ರೀಡಾ ನಿಯಮಗಳಿಗೆ, ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ನೈಜ ಕ್ರೀಡಾ ಮನೋಭಾವ ಹೊಂದಬೇಕು. ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹಿರಿಮೆ-ಗರಿಮೆ ಹೆಚ್ಚಿಸುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾತ್ರಾಳ-ಬಾಲಗಾಂವ-ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ದೈನಂದಿನ ಜೀವನದಲ್ಲಿ ಕ್ರೀಡೆ, ಯೋಗ, ವ್ಯಾಯಾಮದಂತಹ ಚಟುವಟಿಕೆಗಳನ್ನು ನಮ್ಮ ಜೀವನದ ದೈನಂದಿನ ಭಾಗವಾಗಿಸಿಕೊಂಡು ಕ್ರಿಯಾಶೀಲತೆ ಹೊಂದಬೇಕು. ಇಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ, ತಮ್ಮ ಆಸಕ್ತಿಯ ಆಟೋಟಗಳಲ್ಲಿ ಪಾಲ್ಗೊಂಡು ಈ ಕ್ರೀಡಾಕೂಟದ ಮಹತ್ವ ಸಾರಬೇಕು. ಮಾನಸಿಕ ಸದೃಢತೆ ಹೊಂದಲು ಕ್ರೀಡೆ ಅಗತ್ಯ, ವೃಕ್ಷ ಸಂರಕ್ಷಣೆ ಅತ್ಯಂತ ಪುಣ್ಯದ ಕಾರ್ಯವಾಗಿದೆ. ಸಾರ್ವಜನಿಕರು ಗಿಡ-ಮರಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2024ನೇ ಸಾಲಿನಲ್ಲಿ ಚೆನ್ನೈನಲ್ಲಿ ನಡೆದ 53ನೇ ಜೂನಿಯರ್ ನ್ಯಾಷನಲ್ ಟ್ರ್ಯಾ್ಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 10 ಕಿ.ಮೀ. ಸ್ಕಾಂಚ್ ರೇಸ್ನಲ್ಲಿ ಪ್ರಥಮ ಸ್ಥಾನ ಪಡೆದು, ಅದೇ ವರ್ಷ ವಿಜಯಪುರದಲ್ಲಿ ನಡೆದ 28ನೇ ಜೂನಿಯರ್ ನ್ಯಾಷನಲ್ ಸೈಕ್ಲಿಂಗ್ 40 ಕಿ.ಮೀ ಟೀಮ್ ಟೈಮ್ ಟ್ರಯಲ್ ಇವೆಂಟ್ನಲ್ಲಿ ದ್ವಿತೀಯ ಸ್ಥಾನ ಹಾಗೂ ದೆಹಲಿಯಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಚಾಂಪಿಯನ್ ಶಿಪ್ದಲ್ಲಿ ಭಾಗವಹಿಸಿ 15 ಕಿ.ಮೀ ಸ್ಕ್ರ್ಯಾಂಚ್ ರೇಸ್ನಲ್ಲಿ 5ನೇ ಸ್ಥಾನವನ್ನು ಪಡೆದಿರುವ ಸೈಕ್ಲಿಸ್ಟ್ ಸುಜಲ್ ಸಾಗರ ಜಾಧವ ಅವರನ್ನು ಸನ್ಮಾನಿಸಲಾಯಿತು.
ಮುಧೋಳ ಪ್ರಾದೇಶಿಕ ವಲಯದ ಗಸ್ತು ಅರಣ್ಯ ಪಾಲಕ ಫಕೀರಪ್ಪ ಭಾಂಗಿ, ಬೆಳಗಾವಿ ಪ್ರಾದೇಶಿಕ ವಲಯದ ಗಸ್ತು ಅರಣ್ಯ ಪಾಲಕ ಮಲ್ಲಿಕಾರ್ಜುನ ಜ್ಯೋತೆನ್ನವರ, ಬೆಳಗಾವಿಯ ಕಾರ್ಯಯೋಜನೆ ಮತ್ತು ಅರಣ್ಯ ಸಮೀಕ್ಷೆಯ ಉಪ ವಲಯದ ಅರಣ್ಯ ಅಧಿಕಾರಿ ವ ಮೋಜಣಿದಾರ ಸಂಜಯಕುಮಾರ ಬಿಜಕಲ್ ಬಿ., ರಾಮದುರ್ಗ ಪ್ರಾದೇಶಿಕ ವಲಯದ ಗಸ್ತು ಅರಣ್ಯ ಪಾಲಕ ಮಹಾಂತೇಶ ತೇಲಿ, ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಅವರು ಕ್ರೀಡಾಂಗಣದಲ್ಲಿ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು.
ಬೆಳಗಾವಿ ಪ್ರಾದೇಶಿಕ ವಿಭಾಗ, ಬೆಳಗಾವಿ ಸಾಮಾಜಿಕ ವಿಭಾಗ, ವಿಜಯಪುರ ಅರಣ್ಯ ವಿಭಾಗ, ಬಾಗಲಕೋಟೆ ಅರಣ್ಯ ವಿಭಾಗ, ಗೋಕಾಕ ಅರಣ್ಯ ವಿಭಾಗ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.
ಈ ಸಂದರ್ಭದಲ್ಲಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ.ಬಗಾಯತ್, ಬೆಳಗಾವಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜು, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಬಾಗಲಕೋಟೆಯ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಪಿ.ಎಸ್, ಗೋಕಾಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಪ್ರಿಯದರ್ಶಿ, ಬಾಗಲಕೋಟೆ ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಬೆಳಗಾವಿಯ ವಿಶಾಲ ಪಾಟೀಲ, ಬೆಳಗಾವಿ ಅರಣ್ಯ ಸಂಚಾರಿಗಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, ವಿಜಯಪುರ ಪ್ರಾದೇಶಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ, ವಿಜಯಪುರ ಸಾಮಾಜಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಪಾಕ್, ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಆರ್. ಚವ್ಹಾಣ, ಇಂಡಿ ಪ್ರಾದೇಶಿಕ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಸಂಗಾಲಕ, ವಿಜಯಪುರದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಆಜೂರ, ಬಸವನ ಬಾಗೇವಾಡಿಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಗಾಣಿಗೇರ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಉಪ ವಲಯ ಅಧಿಕಾರಿ ವಿರೇಶ ಆಂದೋಲಿ, ಇಂಡಿ ವಲಯ ಸಾಮಾಜಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಧೂಳೆ, ಗಸ್ತು ಅರಣ್ಯ ಪಾಲಕ ಧನರಾಜ ಮುಜಗೊಂಡ ಸೇರಿದಂತೆ ಕ್ರೀಡಾಪಟುಗಳು, ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ -ಅಶೋಕ ದಳವಾಯಿ
