ಸಪ್ತಸಾಗರ ವಾರ್ತೆ ವಿಜಯಪುರ, ಆ. 7:
ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳ ಮಧ್ಯೆ ಕಲಹ ಉಂಟಾಗಿ ಓರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ನಗರ ಹೊರ ವಲಯದ ಯೋಗಾಪುರ ಗ್ರಾಮದಲ್ಲಿ ನಡೆದಿದೆ.
ಶ್ರೀ ಸತ್ಯ ಸಾಯಿಬಾಬಾ ಶಾಲೆಯ ವಿದ್ಯಾರ್ಥಿ ಅನ್ಸ್ (11) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಸುನೀಲ್ ಪುತ್ರ ಅನ್ಸ್
5ನೇ ತರಗತಿಯಲ್ಲಿ ಓದುತ್ತಿದ್ದ. ಕೈಯಲ್ಲಿ ಕಟ್ಟುವ ವಾಚ್ ಗಾಗಿ ಬಾಲಕ ಅನ್ಸ್ ಈತನ ಮೇಲೆ 9ನೇ ತರಗತಿ ಬಾಲಕರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದ ಅನ್ಸ್ ಈತನನ್ನು ಅವರ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಐದು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಬಾಲಕ ಸಾವನಪ್ಪಿದ್ದಾನೆ.
ಪೋಷಕರು ಶಾಲೆ ಎದುರು ಬಾಲಕನ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರ ಪ್ರತಿಭಟನೆಗೆ ಸ್ಥಳೀಯರು ಸಾಥ್ ನೀಡಿದ್ದಾರೆ.
ಅನ್ಸ್ ಕೈಯಲ್ಲಿ ಕೈ ಗಡಿಯಾರ ಕಟ್ಟಿದ್ದ. ಈ ವಾಚ್ ಗಾಗಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ಸಂಭವಿಸಿ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ನಡೆಸಿ ಅನ್ಸ್ ಕೈಯಲ್ಲಿದ್ದ ವಾಚು ಕಿತ್ತುಕೊಂಡಿದ್ದರು.
ಪೋಷಕರು ಈ ವಿಚಾರವಾಗಿ ಶಾಲಾ ಮುಖ್ಯಸ್ಥರ ಗಮನಕ್ಕೆ ತಂದರೂ ಅವರು ಈ ಬಗ್ಗೆ ಗಮನಹರಿಸಿರಲಿಲ್ಲ.
ನಿಮ್ಮ ಮಗ ಸತ್ತಿದ್ದಾನಾ ಎಂದು ಅನ್ಸ್ ತಂದೆ ತಾಯಿಯನ್ನೇ ಶಾಲಾ ಮುಖ್ಯಸ್ಥರು ಬೈದು ಕಳಿಸಿದ್ದರು.
ಈಗ ಬಾಲಕ ಸತ್ತ ಬಳಿಕ ಪೋಷಕರು ಶಾಲೆಯ ಎದುರು ಬಾಲಕನ ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ್ ಯಲಿಗಾರ್, ಗಾಂಧಿ ಚೌಕ್ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ನೀಡಿ ಪರಿಶೀಲಿಸಿದರು.
ಅನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು.
ಬಾಲಕನ ಶವ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಸದ್ಯ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ವಿರುದ್ಧ ಹಾಗೂ
ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಸಾವು
