ಸಪ್ತಸಾಗರ ವಾರ್ತೆ ವಿಜಯಪುರ, ಸೆ. 7: ಹಲಸಂಗಿ ಮಧುರಚೆನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಅಲ್ಹಜ್ ನಬಿಪಟೇಲ್ ವಡಗೇರಿಯವರ ಸಂಸ್ಮರಣ ಗ್ರಂಥ ವಡಗೇರಿ ನಮಃ, ಬಿ ಆರ್ ಪೊಲೀಸ್ಪಾಟೀಲ ರಚಿಸಿದ ತುಲಾಭಾರ ಪ್ರಸಂಗ ಹಾಗೂ ತುಲಾಭಾರ ನಾಟಕ ಗ್ರಂಥಗಳ ಲೋಕಾರ್ಪಣೆ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರನ್ನು ತುಲಾಭಾರ ಮಾಡಿರುವುದು ಇತಿಹಾಸವಾಗಿದೆ. ನುಡಿದಂತೆ ನಡೆದು ಇಡೀ ಜೀವನವೇ ಸಮಾಜ ಪರಿವರ್ತನೆಗಾಗಿ ಶ್ರಮಿಸಿದವರಾಗಿದ್ದು, ಇಡೀ ಮನು ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಭೊಮ್ಮಯ್ಯ ಹಾಗೂ ಮನಗೂಳಿ ಸಯ್ಯದ ಪೀರಾ ಆಶ್ರಮದ ಪೀಠಾಧಿಪತಿಗಳಾದ ಎಫ್.ಎಚ್ ಇನಮಾದಾರ ಆಶೀರ್ವಚನ ನೀಡಿ, ಸಮಾಜದಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾಗಿದ್ದು, ಇಡೀ ಮಾನವ ಜನಾಂಗ ಗೌರವಿಸುವ ವೃತ್ತಿಯಾಗಿದೆ. ಗುರುಗಳು ಮಾಡಿದ ಸೇವೆಗೆ ಪ್ರತಿಯಾಗಿ ಅವರನ್ನು ಸ್ಮರಿಸಿ ಸಮಾಜಮುಖಿಯಾಗಲು ಸಹಕರಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ವಡಗೇರಿ ನಮಃ ಗ್ರಂಥ ಪರಿಚಯ ಮಾಡಿದ ಪ್ರೊ. ಬಿ.ಆರ್. ಪೊಲೀಸ್ಪಾಟೀಲ, ತುಲಾಭಾರ ಪ್ರಸಂಗ ಗ್ರಂಥ ಪರಿಚಯಿಸಿದ ಡಾ. ವಿ.ಎಂ. ಬಾಗಾಯತ, ತುಲಾಭಾರ ನಾಟಕ ಪರಿಚಯ ಮಾಡಿದ ಡಾ. ಪಾಟೀಲ ದಿ. ನಬಿಪಟೇಲರ ಜೀವನ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಘಟಕ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಬಿ.ಎನ್. ವಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಆರ್.ಕೆ.ಕುಲಕರ್ಣಿ, ಡಾ. ಎಂ. ಎಸ್. ಮದಭಾವಿ, ಡಾ. ವ್ಹಿ.ಡಿ. ಐಹೊಳ್ಳಿ ಮಾತನಾಡಿದರು.
ಹಿರಿಯ ಸಾಹಿತಿ ಪ್ರೊ. ಎನ್.ಜಿ. ಕರೂರ ಸಮಾರಂಭ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಶಿಕ್ಷಣ ರಂಗದಲ್ಲಿ ಸಾಧನೆಗೈದ ಶಿಕ್ಷರನ್ನು ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಅಶೋಕ ಶಾಬಾದಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಎನ್. ಹಕೀಮ್, ಸಂಪಾದಕ ಮಂಡಳಿಯ ಡಾ. ಶ್ರೀಶೈಲ ತರಡಿ, ಜಗದೇವ ಗಲಗಲಿ, ಮಲ್ಲಪ್ಪ ಮದಭಾವಿ, ಇ.ರಾ. ಸಾರವಾಡ, ಕಬೂಲ್ ಕೊಕಟನೂರ, ಎಂ.ಜಿ. ಕಾಚೂರ, ಬಸನಗೌಡ ಛಾಯಾಗೋಳ, ಅಲ್ಲಮಪ್ರಭು ಗಲಗಲಿ, ಅದಿತಿ ಬಿದರಿ, ಮಂಜುನಾಥ ಅಲೇಗಾವಿ, ಜಿ.ಡಿ. ಕೊಟ್ನಾಳ, ಪಾಚಾರ್ಯ ಎ.ಎಸ್. ಪಾಟೀಲ, ಈರಣ್ಣ ಶಹಾಪೂರ, ಕೆ.ಎನ್. ಬಿರಾದಾರ, ಅಮೀನಪಟೇಲ ಕಾಚೂರ, ಡಾ. ಬಿ.ಎಂ. ಕೊರಬು, ಮಹಮ್ಮದ ಇರ್ಫಾನ ಸಾರವಾಡ, ಎಸ್.ಎಂ. ಶೇಖ, ಡಿ.ಕೆ. ದಾಸರ, ಬಿ.ಆರ್. ಬನಸೋಡೆ, ಬಿ. ಜಿ. ಚಿಮ್ಮಲಗಿ, ಧರೆಪ್ಪ ಸಲಗರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಎನ್. ಆರ್. ಕುಲಕರ್ಣಿ ಸೇರಿದಂತೆ ನಬಿಪಟೇಲ ವಡಗೇರಿಯವರ ಶಿಷ್ಯ ಬಳಗ ಪಾಲ್ಗೊಂಡಿದ್ದರು.
ಶಿಕ್ಷಕ ನಬಿ ಪಟೇಲ್ ವಡಿಗೇರಿ ಸೇವೆ ಶ್ಲಾಘನೆ
