ಸಪ್ತಸಾಗರ ವಾರ್ತೆ, ವಿಜಯಪುರ, ಏ. 11 (ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ):
ಯಾವುದೋ ಶತಮಾನದಲ್ಲಿ ಆಗಿ ಹೋದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನಾವು ಇವತ್ತಿಗೂ ನೆನೆಯುತ್ತೇವೆ. ಅಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದು ಹಿರಿಯ ಸಾಹಿತಿ ಫ.ಗು. ಸಿದ್ದಾಪುರ ಅವರು ಹೇಳಿದರು.
ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿ ಸ್ಥಾನ ವಹಿಸಿ ಹಿರಿಯ ಸಾಹಿತಿ ಸುಭಾಸ ಯಾದವಾಡ ಅವರು ಮಾತನಾಡಿ, ಕಡಿಮೆ ಶಬ್ದ ಬಳಸಿ ಹೆಚ್ಚು ಹೇಳುವ ಕಲೆ ಕವಿಗೆ ಮತ್ತು ಕವಿತೆಗೆ ಇದೆ ಎಂದು ಹೇಳಿದರು.
ಡಾ ಮಲ್ಲಿಕಾರ್ಜುನ ಮೇತ್ರಿ ಅವರು ಆಶಯನುಡಿ ಮಾತನಾಡಿ, ಇಡೀ ಜಗತ್ತಿನ ದಾರ್ಶನಿಕರ ಮೊದಲ ಸಾಲಿನಲ್ಲಿ ನಿಲ್ಲುವ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರಲ್ಲಿ ಪುಸ್ತಕ ಮೇಳ ಹಮ್ಮಿಕೊಳ್ಳುವ ಮೂಲಕ ಮತ್ತೆ ಮತ್ತೆ ಅವರನ್ನು ನೆನೆಯುತ್ತೇವೆ. ಅದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವುದಾಗಿದೆ ಎಂದರು.
ಕವಿಗಳಲ್ಲಿ ಇಂದು ಪ್ರಗತಿಪರ ನೆಲೆ ಕಳೆದುಕೊಳ್ಳುತ್ತಿದೆ. ನಮ್ಮ ಮನೋಶಕ್ತಿ ಹೆಚ್ಚಿಸುವ ಶಕ್ತಿ ಕಾವ್ಯಕ್ಕಿದೆ. ಕಾವ್ಯ ಕಟ್ಟುವುದು ಕುಶಲಕರ್ಮಿ ಕೆಲಸವಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಡಾ. ಮೈನುದ್ದಿನ್ ರೇವಡಿಗಾರ, ಚಂದ್ರಶೇಖರ ಸಿಂಗಾಡಿ, ಮುದ್ದಣ್ಣ ಭೀಮನಗರ, ಶಿವಾಜಿ ಮೋರೆ, ಸಮೀರ ಹಾದಿಮನಿ ಕವನ ವಾಚಿಸಿದರು.
ಕವಿಗೋಷ್ಠಿಗೂ ಮೊದಲು ಎರಡನೇ ದಿನದ ನಾಲ್ಕನೇ ಗೋಷ್ಠಿ ನನ್ನ ನೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ಮಾತು ಸಂವಾದದಲ್ಲಿ ಸುಷ್ಮಾ ಪವಾರ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ, ಪವಿತ್ರಾ ಕುಂಬಾರ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಸುಕನ್ಯಾ ಹತ್ತಿ ಅವರು ಹೋರಾಟದ ಹಾದಿಗೆ ಹಣತೆ ಹಿಡಿದವರು ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ರಾಮ ಬಿರಾದಾರ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ.ಎಸ್. ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಸೋಮು ರಣದೇವಿ, ಬಿ.ಆರ್. ಬನಸೋಡೆ, ರಾಜೇಶ ಚಲವಾದಿ ಉಪಸ್ಥಿತರಿದ್ದರು.
ಬುದ್ಧ, ಬಸವ, ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು -ಫ.ಗು. ಸಿದ್ದಾಪುರ


