ಶುದ್ಧ ಸಚ್ಚಾರಿತ್ರ್ಯದ ರಾಜಕಾರಣಿ ವಾಜಪೇಯಿ: ಯತ್ನಾಳ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 25: ಪರಮಾಣು ಶಕ್ತಿಯಲ್ಲಿ ಭಾರತ ಮತ್ತೊಂದು ಹಂತಕ್ಕೆ ಹೋಗಲು ವಾಜಪೇಯಿ ಅವರ ದೂರದರ್ಶಿತ್ವ ಮತ್ತು ದೇಶಪ್ರೇಮವೇ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಗುರುವಾರ ವಾಜಪೇಯಿ ಅವರ 101ನೇ ಜನ್ಮ ದಿನದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ವಾಜಪೇಯಿ ಅವರು ಶುದ್ಧ ಸಚ್ಚಾರಿತ್ರ್ಯದ ರಾಜಕಾರಣಿ, ಅಜಾತಶತ್ರುರಾಗಿದ್ದ ಅವರು ರಾಷ್ಟ್ರ ಚಿಂತಕರಾಗಿದ್ದರು ಎಂದರು.
ದೂರಸಂಪರ್ಕ ಕ್ರಾಂತಿ ಆದದ್ದು ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ. ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಮೂಲಕ ಅಟಲ್ ಜಿ ಅವರು 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು ಎಂದರು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಅಟಲ್ ಜಿ ನೀಡಿದ್ದರು. ವಾಜಪೇಯಿಯವರ ದಿಟ್ಟ ನಿರ್ಧಾರದಿಂದ, ನಮ್ಮ ಸೇನೆಯ ಪರಾಕ್ರಮದಿಂದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೋಲನ್ನಪ್ಪಬೇಕಾಯಿತು. ತಮ್ಮ ಅಧಿಕಾರದುದ್ದಕ್ಕೂ ಉತ್ತಮ ಆಡಳಿತ ನೀಡಿ, ಭಾರತವನ್ನು ಪ್ರಗತಿಯತ್ತ ಕೊಂಡೊಯ್ದ ಭಾರತ ರತ್ನ ವಾಜಪೇಯಿ ಅವರ ಜನ್ಮ ಜಯಂತಿಯನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ವಾಜಪೇಯಿ ಅವರ ಮಾರ್ಗದಲ್ಲಿ ನಡೆಯುವ ಮೂಲಕ ಆರ್ಥಿಕವಾಗಿ ಜಗತ್ತಿನ 3ನೇ ಶಕ್ತಿಯುತ ದೇಶವಾಗಿ ಹೊರಹೊಮ್ಮಿದೆ. ನಾನು ಕೂಡ ಅವರ ಕಾಲದಲ್ಲಿ ರೈಲ್ವೆ, ಜವಳಿ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅದಕ್ಕೆ ನಗರದ ಪ್ರಮುಖ ರಸ್ತೆಗೆ ಅವರ ಹೆಸರನ್ನಿಟ್ಟು, ಮೂರ್ತಿ ಸ್ಥಾಪಿಸಿ ಪ್ರತಿ ವರ್ಷ ಅವರ ಜನ್ಮದಿನ ಆಚರಿಸುತ್ತಿದ್ದೇವೆ ಎಂದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಉಪಮೇಯರ್ ಸುಮಿತ್ರಾ ಜಾಧವ, ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಜವಾಹರ ಗೋಸಾವಿ, ಕುಮಾರ ಗಡಗಿ, ಗಿರೀಶ ಬಿರಾದಾರ, ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ನಿರ್ದೇಶಕ ಸದಾಶಿವ ಗುಡ್ಡೊಡಗಿ, ಬಸವರಾಜ ಗಣಿ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ರಾಜೇಶ ದೇವಗಿರಿ, ಪಾಂಡುಸಾಹುಕಾರ ದೊಡ್ಡಮನಿ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ವಿಕ್ರಮ ಗಾಯಕವಾಡ, ರಾಜು ಜಾಧವ, ರಾಜಶೇಖರ ಬಜಂತ್ರಿ, ಬಸವರಾಜ ಬಿರಾದಾರ, ದತ್ತಾ ಗೊಲಂಡೆ, ರಾಚು ಬಿರಾದಾರ, ಆನಂದ ಹಂಜಿ, ಲಕ್ಷ್ಮೀ ಕನ್ನೊಳ್ಳಿ ಮತ್ತಿತರರು ಇದ್ದರು.

Share this