ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ

ಸಪ್ತಸಾಗರ ವಾರ್ತೆ ವಿಜಯಪುರ ಮೇ. 5 ಗ್ರಾಮೀಣ ಬಡಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮಾ ಗಾಂಧಿ‌ ನರೇಗಾ ಮಹತ್ವದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಜಿಲ್ಲಾ‌ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ) ತಾಂತ್ರಿಕ ಸಂಯೋಜಕರು, ತಾಲೂಕು ಎಮ್.ಐ.ಎಸ್ ಸಂಯೋಜಕರು, ಐ.ಇ.ಸಿ ಸಂಯೋಜಕರು, ಆಡಳಿತ ಸಹಾಯಕರು ಹಾಗೂ ತಾಂತ್ರಿಕ ಸಹಾಯಕರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‌
ಕೆಲಸದ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಅರ್ಹ ಕುಟುಂಬಗಳಿಗೆ ಕಾಲಮಿತಿಯೊಳಗೆ ಉದ್ಯೋಗ ಒದಗಿಸಬೇಕು ಹಾಗೂ ಕಾಮಗಾರಿಗಳನ್ನು ನಿಗದಿತ ಸಮಯದೊಳಗಾಗಿ ಪೂರ್ಣಗೊಳಿಸುವತ್ತ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ಉದ್ಯೋಗ ಮಾಡಿದ ಕೂಲಿಕಾರರ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು, ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಪಾಡಬೇಕು. ಎಂಐಎಸ್ ನಲ್ಲಿ ಸಮಯಕ್ಕೆ ಸರಿಯಾಗಿ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದರು.
ಜೊತೆಗೆ, ನೀರಿನ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಹಸಿರುಪರಿಸರ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.
ಮನರೇಗಾ ಯೋಜನೆಯಡಿ ತಾಲೂಕುವಾರು ಗುರಿ ನಿಗದಿಪಡಿಸಲಾಗಿದೆ. ನಿಗದಿಪಡಿಸಿರುವ ಮಾನವ ದಿನಗಳ ಸೃಜನೆ ಮಾಡಿ ಗುರಿ ಸಾಧಿಸಲು ಅಧಿಕಾರಿಗಳು ಕ್ರಮ ವಹಸಿಬೇಕು ಎಂದು ಸೂಚಿಸಿದರು.
ಈಗಾಗಲೇ ಅನುಮೋದನೆಗೊಂಡ ಪ್ರಗತಿ ಹಂತದ ಕೂಲಿ ಆಧಾರಿತ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಗ್ರಾ.ಪಂ.ಗಳಲ್ಲಿ ಎನ್.ಎಮ್.ಆರ್. ಜನರೇಟ್ ಮಾಡಿ ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು. ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯ ಮೇಲೆ ಅವಲಂಬಿತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ಉದ್ಯೋಗ ಒದಗಿಸಿ ನಿಗದಿತ ಗುರಿ ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿ 211 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರ ಫೇಸ್ ಅಥೆಂಟಿಕೇಷನ್ ಅನ್ನು ಎರಡು ದಿನಗಳಲ್ಲಿ ಕಡ್ಡಾಯವಾಗಿ ಶೇ.100ರಷ್ಟು ಆರಂಭಿಸಬೇಕು. ಉದ್ಯೋಗ ಒದಗಿಸಿರುವ ಎಲ್ಲಾ ಕೂಲಿಕಾರರಿಗೆ ನಿಗದಿತ ಸಮಯದಲ್ಲಿ ಕೂಲಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿಯವರೆಗಿನ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಕೂಡಲೇ ಶೇ. 100 ರಷ್ಟು ಪೂರ್ಣಗೊಳಿಸಬೇಕು ಎಂದರು.
ಕಳೆದ 2025-26 ನೇ ಸಾಲಿನಲ್ಲಿ ಎಲ್ಲ ಅನುಮೋದಿತ ಕಾಮಗಾರಿಗಳಿಗೆ ಎನ್.ಎಮ್.ಆರ್ ತೆಗೆಯಬೇಕು. ಈ ಎನ್.ಎಮ್.ಆರ್. ಗಳನ್ನು ಶೂನ್ಯ ಮಾಡದೇ ಕಡ್ಡಾಯವಾಗಿ ಎಮ್.ಐ.ಎಸ್ ಮಾಡಬೇಕು. ನರೇಗಾ ಕೂಲಿಕಾರರ ಇ-ಕೆವೈಸಿ ಮಾಡದಿದ್ದಲ್ಲಿ ಕೂಲಿಕಾರರಿಗೆ ಎನ್.ಎಮ್.ಆರ್ ಜನರೇಟ್ ಮಾಡಲು ಸಾಧ್ಯವಿಲ್ಲ. ಹಾಗಾಗಿ‌ ಮುಂಬರುವ ಒಂದು ವಾರದಲ್ಲಿ ಕಡ್ಡಾಯವಾಗಿ ಎಲ್ಲ ನೋಂದಾಯಿತ ಕೂಲಿಕಾರರ ಇ-ಕೆವೈಸಿಯನ್ನು ಶೇ. 100 ರಷ್ಟು ಪೂರ್ಣಗೊಳಿಸಬೇಕು. ಈ ವಿಷಯದ ಕುರಿತು ಸಂಬಂಧಪಟ್ಟ ಸಿಬ್ಬಂದಿಗೆ ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ 2026-27 ನೇ ಸಾಲಿನ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಈಗಾಗಲೇ ತಂತ್ರಾಂಶದಲ್ಲಿ ಎಂಟ್ರಿ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಲಾಗಿನ್ ನಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಎರಡು ದಿನಗಳಲ್ಲಿ ತಾಲೂಕು ಪಂಚಾಯಿತಿ ಲಾಗಿನ್ ಗೆ ಕಳುಹಿಸಬೇಕು. ಬಳಿಕ, ರಾಜ್ಯ, ಜಿಲ್ಲಾ ಗುಣ ನಿಯಂತ್ರಣ, ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಒಂಬಡ್ಸ್ ಮನ್ ವಸೂಲಾತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಬೀತಾದ ಪ್ರಕರಣಗಳ ಮೊತ್ತವನ್ನು ಕೂಡಲೇ ವಸೂಲಾತಿ ಮಾಡಿ ಬ್ಯಾಂಕ್ ಗೆ ಭರಣಾ ಮಾಡಿ. ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಬೇಕು ಎಂದರು.
ತಾಲೂಕಾ ಹಂತದಲ್ಲಿ ಪ್ರಕರಣವಾರು ವಸೂಲಾತಿ ಪ್ರಗತಿ ಕುರಿತು ಪರಿಶೀಲಿಸಿ, ಈ ಪ್ರಕರಣಗಳನ್ನು ಸಾಬೀತುಪಡಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ವಾರ ಅಡಹಾಕ್ ಸಮಿತಿ ಸಭೆಗಳನ್ನು ಏರ್ಪಡಿಸಿ, ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ಏ.ಟಿ.ಆರ್ ವರದಿಯನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು. ಈ ವಿಷಯದ ಕುರಿತು ಸಂಬಂಧ ಪಟ್ಟ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಗತಿ ಸಾಧಿಸಲು ಇದೇ ವೇಳೆ ಸೂಕ್ತ ನಿರ್ದೇಶನ ನೀಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಅನುಷ್ಠಾನ ಇಲಾಖೆಗಳಡಿ ಪ್ರಗತಿ ಹಂತದ ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲಾ ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.

Share this